ADVERTISEMENT

ಚಿಲ್ಕುಂದ ಗ್ರಾಮ ಪಂಚಾಯತ್ ಪಿಡಿಒ, ಅಧ್ಯಕ್ಷರಿಗೆ ₹1.12 ಲಕ್ಷ ದಂಡ!

ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಲೋಪ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 14:13 IST
Last Updated 16 ಜೂನ್ 2025, 14:13 IST
ಹುಣಸೂರು ತಾಲ್ಲೂಕಿನ ಚಿಲ್ಕುಂದ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿರುವ ದೊಡ್ಡಕೆರೆಗೆ ಭೇಟಿ ನೀಡಿದ್ದ ತನಿಖಾಧಿಕಾರಿಗಳ ತಂಡ (ಸಂಗ್ರಹ ಚಿತ್ರ)
ಹುಣಸೂರು ತಾಲ್ಲೂಕಿನ ಚಿಲ್ಕುಂದ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿರುವ ದೊಡ್ಡಕೆರೆಗೆ ಭೇಟಿ ನೀಡಿದ್ದ ತನಿಖಾಧಿಕಾರಿಗಳ ತಂಡ (ಸಂಗ್ರಹ ಚಿತ್ರ)   

ಹುಣಸೂರು: ತಾಲ್ಲೂಕಿನ ಚಿಲ್ಕುಂದ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆಯಲ್ಲಿ ಅನುಮೋದಿಸಿದ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸುವ ಬದಲಿಗೆ ಅನುಮೋದನೆ ಆಗದ ಕೆರೆ ಅಭಿವೃದ್ಧಿ ಮಾಡಿ ಹಣ ವ್ಯಯ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಓಂಬುಡ್ಸ್ ಪರ್ಸನ್ ಪ್ರಾಧಿಕಾರ ಪಿಡಿಒ, ಎಂಜಿನಿಯರ್ ಮತ್ತು ಅಧ್ಯಕ್ಷರಿಗೆ ₹ 1.11 ಲಕ್ಷ ದಂಡ ವಿಧಿಸಿ ಆದೇಶಿಸಿದೆ.

ಗ್ರಾಮ ಪಂಚಾಯಿತಿಯಲ್ಲಿ ಕಳೆದ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಗ್ರಾಮದ ಸರ್ವೆ ನಂ–198ರ ದೊಡ್ಡಕೆರೆ ಅಭಿವೃದ್ಧಿಗೆ ಸಭೆಯಲ್ಲಿ ಅನುಮೋದನೆ ಪಡೆದಿತ್ತು. ಆದರೆ ಅನುಮೋದನೆ ಪಡೆದ ಕೆರೆ ಅಭಿವೃದ್ಧಿ ಮಾಡುವ ಬದಲಿಗೆ ಸರ್ವೆ ನಂ–156ರಲ್ಲಿನ ಹುಲ್ಲುಕೆರೆ ಅಭಿವೃದ್ಧಿಗೊಳಿಸಿ ಯೋಜನೆ ಹಣ ಬಳಸಿಕೊಂಡಿದ್ದಾರೆ ಎಂದು ಗ್ರಾಮದ ಪ್ರೇಮಕುಮಾರ್ ಜಿಲ್ಲಾ ಓಂಬುಡ್ಸ್ ಪರ್ಸನ್‌ಗೆ  2022ರ ಜನವರಿಯಲ್ಲಿ ದೂರು ನೀಡಿದ್ದರು.

ಈ ಸಂಬಂಧ ಸುದೀರ್ಘ ತನಿಖೆ ನಡೆಸಿದ ಆಡಳಿತ ಅಂತಿಮವಾಗಿ ಅರ್ಜಿದಾರರು ಸಲ್ಲಿಸಿದ ದೂರಿನಲ್ಲಿ ಸತ್ಯಾಂಶ ಕಂಡುಬಂದ ಕಾರಣ ಯೋಜನೆಗೆ ವ್ಯಯಿಸಿದ ಒಟ್ಟು ₹ 1,11,497 ವನ್ನು ಪಂಚಾಯಿತಿ ಅಧ್ಯಕ್ಷ,‍ ಪಿಡಿಒ ಮತ್ತು ನರೇಗಾ ತಾಂತ್ರಿಕ ಎಂಜಿನಿಯರಿಂದ ವಸೂಲಿ ಮಾಡುವಂತೆ ಆದೇಶಿಸಿತ್ತು.

ADVERTISEMENT

ಈ ಆದೇಶವನ್ನು ಪ್ರಶ್ನಿಸಿ ಪಿಡಿಒ ಮತ್ತು ಅಧ್ಯಕ್ಷರು ರಾಜ್ಯ ಓಂಬುಡ್ಸ್ ಪರ್ಸನ್ ಪ್ರಾಧಿಕಾರಕ್ಕೆ 2024ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ರಾಜ್ಯ ಓಂಬುಡ್ಸ್ ಪರ್ಸನ್ ಅಕ್ರಮ ನಡೆದಿರುವುದು ತನಿಖೆಯಿಂದ ತಿಳಿದುಬಂದಿದ್ದು, ಚಿಲ್ಕುಂದ ಗ್ರಾಮ ಪಂಚಾಯಿತಿ ದೊಡ್ಡಕೆರೆಯ 23 ಎಕರೆ 34 ಗುಂಟೆ ವಿಸ್ತೀರ್ಣದ ಕೆರೆ ಅಭಿವೃದ್ಧಿಗೆ ಬದಲಾಗಿ ಹುಲ್ಲುಕೆರೆ ಅಭಿವೃದ್ಧಿ ಕಾಮಗಾರಿಯನ್ನು ನರೇಗಾ ಯೋಜನೆಯಲ್ಲಿ ಮಾಡಲಾಗಿದೆ ಎಂಬುದು ದಾಖಲೆಗಳು ಸ್ಪಷ್ಟಪಡಿಸಿದೆ ಎಂದು ತಿಳಿಸಿದೆ.

ಆದೇಶ:

ಕೆರೆ ಅಭಿವೃದ್ಧಿ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ ಯಾವುದೇ ದಾಖಲೆಗಳು ನರೇಗಾ ಮಾರ್ಗಸೂಚಿಯಂತೆ ಕಾಮಗಾರಿಗೆ ಪೂರಕವಾಗಿಲ್ಲ. ಪ್ರತಿಯೊಂದು ಹಂತದಲ್ಲೂ ನಿಯಮ ಉಲ್ಲಂಘಿಸಲಾಗಿದೆ ಎಂದು ಪ್ರಾಧಿಕಾರ ಮೇ 13ರಂದು ದಂಡ ವಿಧಿಸಿ ಆದೇಶ ನೀಡಿದೆ. ಈ ಪ್ರಕರಣದಲ್ಲಿ ನರೇಗಾ ಯೋಜನೆಯ ಹೆಚ್ಚುವರಿ ಕ್ರಿಯಾಯೋಜನೆಯನ್ನು ತಯಾರಿಸಿ ದೃಢೀಕರಿಸಿದ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕರಿಗೆ ತಲಾ ₹ 1,000 ದಂಡ ವಿಧಿಸಿ ಆದೇಶಿಸಿದೆ.

ಆನ್‌ಲೈನ್‌ನಲ್ಲಿ ಪತ್ತೆ:

ಗ್ರಾಮದ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನರೇಗಾ ಕಾಮಗಾರಿಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವ ಅವಕಾಶ ಕೇಂದ್ರ ಸರ್ಕಾರ ಕಲ್ಪಿಸಿದ್ದು, ಅದರಂತೆ ಗ್ರಾಮದಲ್ಲಿ ನಡೆಯುತ್ತಿದ್ದ ಕೆರೆ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿ ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರುದಾರ ಪ್ರೇಮಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಂಬಂಧ ದಾಖಲೆಗಳನ್ನು ಸಂಗ್ರಹಿಸಿ ಓಂಬುಡ್ಸ್ ಪರ್ಸನ್ ಪ್ರಾಧಿಕಾರಕ್ಕೆ 2022ರಲ್ಲಿ ದೂರು ನೀಡಿದ್ದು, ವಿಚಾರಣೆ ನಡೆದು ಅಂತಿಮ ತೀರ್ಪು ಹೊರ ಬಂದಿದೆ ಎಂದರು.

ಕೆರೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಗ್ರಾಮದ ಪ್ರೇಮಕುಮಾರ್ ಓಂಬುಡ್ಸ್ ಪರ್ಸನ್ ಪ್ರಾಧಿಕಾರಕ್ಕೆ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿರುವ ‌ಪ್ರಾಧಿಕಾರ ದೂರಿನಲ್ಲಿ ಸತ್ಯಾಂಶ ಇದ್ದಿದ್ದರಿಂದ ದಂಡ ವಿಧಿಸಿ ಆದೇಶಿಸಿದೆ.
ಗಿರಿಧರ್, ನರೇಗಾ ತಾಲ್ಲೂಕು ನೋಡಲ್ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.