ADVERTISEMENT

ಚಿಟ್‌ ಫಂಡ್ ವಂಚನೆ: ಕಲ್ಯಾಣ ಮಂಟಪದಲ್ಲಿ ಸಂಸ್ಥಾಪಕಿ ಬಂಧನ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 16:18 IST
Last Updated 21 ಜೂನ್ 2022, 16:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಚಿಟ್‌ ಫಂಡ್ ಹೆಸರಿನಲ್ಲಿ ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ್ದ ಆರೋಪದಡಿ 'ವಾರಿಧಿ ಚಿಟ್‌ ಫಂಡ್' ಕಂಪನಿ ಸಂಸ್ಥಾಪಕಿ ಲಕ್ಷ್ಮಿ ಅಲಿಯಾಸ್ ವಾಣಿ (36) ಅವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

‘ರಾಜಾಜಿನಗರ ನಿವಾಸಿ ಲಕ್ಷ್ಮಿ 2018ರಲ್ಲಿ ವಾರಿಧಿ ಚಿಟ್‌ ಫಂಡ್ ಕಂಪನಿ ಸ್ಥಾಪಿಸಿದ್ದರು. ನೂರಾರು ಜನರಿಂದ ಹಣ ಕಟ್ಟಿಸಿಕೊಂಡು ವಂಚಿಸಿ ತಲೆಮರೆಸಿಕೊಂಡಿದ್ದರು. ಅವರ ವಿರುದ್ಧ ಗ್ರಾಹಕರೊಬ್ಬರು ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಲಕ್ಷ್ಮಿ ಎರಡು ಮದುವೆಯಾಗಿದ್ದರು. ಇಬ್ಬರಿಂದಲೂ ದೂರವಾಗಿ ಪ್ರತ್ಯೇಕವಾಗಿ ವಾಸವಿದ್ದರೆಂದು ಗೊತ್ತಾಗಿದೆ. ಕಂಪನಿ ಸ್ಥಾಪನೆಗೂ ಮುನ್ನ ಖಾಸಗಿ ಕಂಪನಿಯೊಂದರಲ್ಲಿ ಆರೋಪಿ ಲಾಭದ ಆಮಿಷವೊಡ್ಡಿ ಜನರಿಂದ ಕಂಪನಿಗೆ ಹಣ ಕಟ್ಟಿಸುತ್ತಿದ್ದರು. ಕೆಲಸದ ಸ್ಥಳದಲ್ಲೇ ಅವರಿಗೆ ಸುದರ್ಶನ್ ಎಂಬುವರ ಪರಿಚಯವಾಗಿ, ಸಲುಗೆ ಬೆಳೆದಿತ್ತು.’

ADVERTISEMENT

‘ಸುದರ್ಶನ್ ಅವರನ್ನು ಮೂರನೇ ಮದುವೆಯಾಗಿದ್ದ ಆರೋಪಿ, ಅವರ ಜೊತೆ ಸೇರಿ ರಾಜಾಜಿನಗರದಲ್ಲಿ ವಾರಿಧಿ ಚಿಟ್ ಫಂಡ್ ಕಂಪನಿ ತೆರೆದಿದ್ದರು. ಉದ್ಯೋಗಿಗಳನ್ನೇ ನಿರ್ದೇಶಕರನ್ನಾಗಿ ಮಾಡಿಕೊಂಡು ಕಂಪನಿ ನೋಂದಣಿ ಮಾಡಿಸಿದ್ದರು. ಹೆಚ್ಚಿನ ಲಾಭ ನೀಡುವುದಾಗಿ ಜಾಹೀರಾತು ನೀಡಿ ಜನರಿಂದ ಹಣ ಕಟ್ಟಿಸಿಕೊಂಡಿದ್ದರು’ ಎಂದೂ ತಿಳಿಸಿವೆ.

ಕೋವಿಡ್‌ನಿಂದ ನಷ್ಟ: ‘ಆರಂಭದಲ್ಲಿ ಉತ್ತಮ ವಹಿವಾಟು ನಡೆಸುತ್ತಿದ್ದ ಕಂಪನಿ, ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಚಿಟ್ ಫಂಡ್ ಹಣ ಪಡೆದಿದ್ದವರು, ವಾಪಸು ನೀಡಿರಲಿಲ್ಲ. ಇದೇ ಕಾರಣಕ್ಕೆ ಆರೋಪಿಗಳು, ಕಂಪನಿ ಕಚೇರಿ ಬಂದ್ ಮಾಡಿ ತಲೆಮರೆಸಿಕೊಂಡಿದ್ದರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಮನೆ ಬಾಡಿಗೆ ಪಾವತಿ ಹಾಗೂ ಜೀವನ ನಿರ್ವಹಣೆಗೂ ಹಣವಿಲ್ಲದೆ ಪರದಾಡುತ್ತಿದ್ದ ಲಕ್ಷ್ಮಿ, ಕೆಂಗೇರಿಯ ಕಲ್ಯಾಣ ಮಂಟಪವೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ದರು. ಅದರಿಂದ ದಿನಕ್ಕೆ ₹ 800 ಸಿಗುತ್ತಿತ್ತು. ಅದೇ ಹಣದಲ್ಲೇ ಜೀವನ ಸಾಗಿಸುತ್ತಿದ್ದರು. ಕಲ್ಯಾಣ ಮಂಟಪದಲ್ಲಿರುವಾಗಲೇ ಅವರನ್ನು ಬಂಧಿಸಲಾಗಿದೆ. ಸುದರ್ಶನ್ ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.