ಮೈಸೂರು: ‘ತಾವು ಕೆಲಸ ಮಾಡುವ ಕಂಪನಿಗಳಲ್ಲಿ ಏನಾಗ್ತಿದೆ ಎಂಬುದು ಕಾರ್ಮಿಕರಿಗೆ ಗೊತ್ತಿಲ್ಲದಾಗಿದೆ’ ಎಂದು ಕಾರ್ಮಿಕ ಮುಖಂಡ ಎಲ್.ಎಂ.ಪೇಶ್ವಾ ಆತಂಕ ವ್ಯಕ್ತಪಡಿಸಿದರು.
ನಗರದ ರೋಟರಿ ಶಾಲೆಯ ಸಭಾಂಗಣದಲ್ಲಿ ಸೋಮವಾರ ನಡೆದ ‘ಇಂಸೊಲ್ವೆನ್ಸಿ ಮತ್ತು ಬ್ಯಾಂಕ್ರಪ್ಟ್ಸಿಸಂಹಿತೆ–2016, ಆರ್ಥಿಕತೆ ಮತ್ತು ಉದ್ಯಮದ ಮೇಲೆ ಇದರ ಪರಿಣಾಮ’ ಕುರಿತ ಉಪನ್ಯಾಸದಲ್ಲಿ ಮಾತನಾಡಿದ ಅವರು, ‘ಕಂಪನಿಗಳ ದಿವಾಳಿತನ ಘೋಷಿಸುವ ಅಂತಿಮ ನಿರ್ಧಾರವನ್ನು ಎನ್ಸಿಎಲ್ಟಿ ತೆಗೆದುಕೊಳ್ಳಲಿದೆ’ ಎಂದು ಹೇಳಿದರು.
‘ಹಲವು ಸಣ್ಣ ಕಂಪನಿಗಳಿಂದ ಹಿಡಿದು ಬೃಹತ್ ಕಂಪನಿಗಳು ಸಹ ಸಾಲ ತೀರಿಸಲಾಗದೆ ದಿವಾಳಿತನ ಘೋಷಿಸಿಕೊಳ್ಳುತ್ತಿವೆ. ಇಂತಹ ಸಂದರ್ಭ ಕಾನೂನು ಪ್ರಕ್ರಿಯೆಯ ಇಂಚಿಂಚು ವಿವರಣೆ ಕಾರ್ಮಿಕರಿಗೆ ಸಿಗಬೇಕಿದೆ. ಕಾಯ್ದೆ ಪ್ರಕಾರವೇ ಮೊದಲು ಕಾರ್ಮಿಕರ ಬಾಕಿ ಪಾವತಿಸಬೇಕು. ನಂತರ ಸಾಲಗಾರರ ಬಾಕಿ ತೀರಿಸಿದ ಬಳಿಕವಷ್ಟೇ ಸರ್ಕಾರದ ಬಾಕಿ ತೀರಿಸಬೇಕಿದೆ’ ಎಂದು ವಿವರಿಸಿದರು.
ಬಿ.ಬಿ.ಅಜಯ್ ಮಾದಯ್ಯ, ಪ್ರತಾಪ್ ಸಿಂಹ, ವಿಕ್ರಮ್ ಹೆಬ್ಬಾರ ವಿವಿಧ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಾಲಾಜಿರಾವ್, ಪ್ರಧಾನ ಕಾರ್ಯದರ್ಶಿ ಜಿ.ಜಯರಾಮ್, ಸುನಂದಾ, ಶ್ರೀನಿವಾಸ್ ಸೇರಿದಂತೆ ಪ್ರಮುಖ ಕಂಪನಿಗಳ ಎಚ್ಆರ್ ವಿಭಾಗದ ಸಿಬ್ಬಂದಿ ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.