ಮೈಸೂರು: ‘ಸತತ 17 ವರ್ಷಗಳಿಂದ ಮೈಸೂರು ರಂಗಾಯಣ ನಡೆಸಿದ ಕಾಲೇಜು ರಂಗೋತ್ಸವ, ಪ್ರಸಕ್ತ ಸಾಲಿನಿಂದ ಮೈಸೂರಿನಾಚೆಗೂ ವಿಸ್ತರಣೆಯಾಗಲಿದೆ’ ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.
‘ಯುವ ಸಮೂಹವನ್ನು ರಂಗಭೂಮಿಯತ್ತ ಆಕರ್ಷಿಸಲಿಕ್ಕಾಗಿಯೇ ಕಾಲೇಜು ರಂಗೋತ್ಸವವನ್ನು ಚಿದಂಬರರಾವ್ ಜಂಬೆ ಆರಂಭಿಸಿದ್ದರು. ಇದೀಗ ಈ ಉತ್ಸವ ಯಶಸ್ಸಿನ ಹಾದಿಯಲ್ಲಿ ಸಾಗಿದ್ದು, ಎಲ್ಲೆಡೆಯಿಂದ ಬೇಡಿಕೆ ಹೆಚ್ಚಿದೆ’ ಎಂದು ಬುಧವಾರ ರಂಗಾಯಣದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಮೈಸೂರಿನ ಮಹಾಜನ ಪದವಿ ಕಾಲೇಜು, ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಹುಣಸೂರಿನ ಅರಸು ಪ್ರಥಮ ದರ್ಜೆ ಕಾಲೇಜು, ತಿ.ನರಸೀಪುರದ ಬಿ.ಎಚ್.ಎಸ್.ಹೈಯರ್ ಎಜುಕೇಷನ್ ಸೊಸೈಟಿ, ಮಂಡ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಳವಳ್ಳಿಯ ಶಾಂತಿ ಕಲಾ ವಿಜ್ಞಾನ ವಾಣಿಜ್ಯ ಕಾಲೇಜು, ಕೊಡಗು ಜಿಲ್ಲೆಯ ಡಯಟ್ ಕಾಲೇಜುಗಳು’ ಈ ಬಾರಿಯ ರಂಗೋತ್ಸವಕ್ಕೆ ಆಯ್ಕೆಯಾಗಿವೆ ಎಂದು ತಿಳಿಸಿದರು.
‘ರಂಗಾಯಣದಲ್ಲಿ ಕಲಿತು, ನುರಿತ 16 ಯುವ ನಿರ್ದೇಶಕರು ಈ ಎಂಟು ಕಾಲೇಜಿಗೆ ನಾಟಕ ಕಲಿಸಲು ತೆರಳಲಿದ್ದು, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಆಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ನಾಟಕ ಅಭಿನಯದ ಜತೆಗೆ, ಬದುಕುವ ಕಲೆಯನ್ನು ಕಲಿಸಿಕೊಡಲಿದ್ದಾರೆ. ಈ ತಂಡಗಳು ಸೆಪ್ಟೆಂಬರ್ನಲ್ಲಿ ಬಿ.ವಿ.ಕಾರಂತರ ಜನ್ಮದಿನದ ಸಂದರ್ಭ ರಂಗಾಯಣ ನಡೆಸಲಿರುವ ಕಾಲೇಜು ರಂಗೋತ್ಸವ ಸ್ಪರ್ಧೆಯಲ್ಲಿ ಭಾಗಿಯಾಗಿ, ತಮ್ಮ ನಾಟಕ ಪ್ರದರ್ಶಿಸಲಿವೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.