ADVERTISEMENT

‘ಚಂದ್ರಯ್ಯ ಅವರದ್ದು ಅಧ್ಯಯನ ಪೂರಕ ಉಪನ್ಯಾಸ’

‘ಬಿ.ನಂ.ಚಂದ್ರಯ್ಯಗೆ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಪ್ರಧಾನ ಗುರುದತ್ತ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 3:54 IST
Last Updated 1 ಮಾರ್ಚ್ 2021, 3:54 IST
ಮೈಸೂರಿನ ಸರಸ್ವತಿಪುರಂ ರೋಟರಿ ಮೈಸೂರು ಪಶ್ಚಿಮದಲ್ಲಿ ಭಾನುವಾರ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಡಾ.ಬಿ.ನಂ.ಚಂದ್ರಯ್ಯ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು
ಮೈಸೂರಿನ ಸರಸ್ವತಿಪುರಂ ರೋಟರಿ ಮೈಸೂರು ಪಶ್ಚಿಮದಲ್ಲಿ ಭಾನುವಾರ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಡಾ.ಬಿ.ನಂ.ಚಂದ್ರಯ್ಯ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು   

ಮೈಸೂರು: ‘ವ್ಯಕ್ತಿಯೊಬ್ಬ ತೀರಿಕೊಂಡ ಬಳಿಕವೂ ಅವರ ಸಾಧನೆ ಉಳಿಯುತ್ತದೆ ಎನ್ನುವುದಕ್ಕೆ ಡಾ.ಬಿ.ನಂ.ಚಂದ್ರಯ್ಯ ಅವರು ಪ್ರತ್ಯಕ್ಷ ನಿದರ್ಶನ’ ಎಂದು ವಿದ್ವಾಂಸ ಡಾ.ಪ್ರಧಾನ ಗುರುದತ್ತ ಇಲ್ಲಿ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌, ಕದಳಿ ಮಹಿಳಾ ವೇದಿಕೆ ಹಾಗೂ ಬಿ.ನಂ.ಚಂದ್ರಯ್ಯ ಅವರ ಕುಟುಂಬಸ್ಥರು ಹಮ್ಮಿಕೊಂಡಿದ್ದ ‘ಡಾ.ಬಿ.ನಂ.ಚಂದ್ರಯ್ಯ ಅವರಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾ ಮಹೋಪಾಧ್ಯಾಯ ಪದವಿ ಪಡೆದಿದ್ದ ಅವರಿಗೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಇತ್ತು. ಅವರ ತರಗತಿ ಯನ್ನು ತಪ್ಪಿಸಲು ಯಾರೂ ಇಷ್ಟಪಡುತ್ತಿರಲಿಲ್ಲ. ಅವರದ್ದು ಅಧ್ಯಯನ ಪೂರಕ ಉಪನ್ಯಾಸವಾಗಿತ್ತು ಎಂದರು.

ADVERTISEMENT

ಡಾ.ಎನ್‌.ಎಂ. ತಳವಾರ ಮಾತನಾಡಿ, ‘ಚಂದ್ರಯ್ಯ ಅವರ ವಿದ್ವತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಆಡಳಿತ ತರಬೇತಿ ಸಂಸ್ಥೆಯಲ್ಲೂ ‘ಆಡಳಿತದಲ್ಲಿ ಕನ್ನಡ ಬಳಕೆ’ ಕುರಿತು ತರಗತಿ ತೆಗೆದು ಕೊಳ್ಳುತ್ತಿದ್ದರು. ಅವರ ಸಮಗ್ರ ಸಾಹಿತ್ಯದ ಕುರಿತು ವಿಚಾರಸಂಕಿರಣ ನಡೆಯ ಬೇಕು. ಸಾಧನೆಯನ್ನು ದಾಖಲಿಸಬೇಕು’ ಎಂದು ಸಲಹೆ ನೀಡಿದರು.

ಡಾ.ಎಸ್‌.ಮಹೇಶ್ವರಿ ಮಾತನಾಡಿ, ‘ಚಂದ್ರಯ್ಯ ಅವರಲ್ಲಿ ವಿನೋದ ಪ್ರವೃತ್ತಿ ಇತ್ತು. ಅವರದ್ದು ಸಮಾಧಾನದ ಸ್ಥಿತಿಯಾಗಿತ್ತು’ ಎಂದರು.

ಪ್ರೊ.ಶ್ರೀಪಾದ ಮಾತನಾಡಿ, ‘ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿರುವ ಅವರು, ಸಾಹಿತ್ಯ ಪ್ರೇಮ, ಪುಸ್ತಕ ಸಂಗ್ರಹದ ಆಸಕ್ತಿಯನ್ನು ವೃದ್ಧಿಸಿ ದ್ದರು’ ಎಂದು ನಮನ ಸಲ್ಲಿಸಿದರು.

ಡಾ.ತಿಪ್ಪೇಸ್ವಾಮಿ ಮಾತನಾಡಿ, ‘ಚಂದ್ರಯ್ಯ ಅವರು ಜ್ಞಾನದ, ತಿಳಿವಳಿಕೆಯ ಭಾಗವನ್ನು ಹಂಚುತ್ತಿದ್ದರು. ಇದು ಅವರ ದೊಡ್ಡ ಗುಣವಾಗಿತ್ತು. ಅವರ ಸಾಹಿತ್ಯ ಕೃತಿಗಳ ಬಗ್ಗೆ ಯುವಜನರಲ್ಲಿ ಒಲವು ಮೂಡಿಸ ಬೇಕಿತ್ತು. ಮುಂದಿನ ದಿನಗಳಲ್ಲಿ ಈ ಕಾರ್ಯ ನಡೆಯಲಿ’ ಎಂದು ಸಲಹೆ ನೀಡಿದರು.

ಡಾ.ಎಚ್‌.ಟಿ.ಶೈಲಜಾ ಮಾತನಾಡಿ, ‘ಕ್ರಿಯಾಶೀಲ, ದೃಢಸಂಕಲ್ಪ ಹೊಂದಿದ್ದ ಅವರಿಗೆ ವಿದ್ಯೆ ಬಗ್ಗೆ ಅಪಾರ ಒಲವು ಇತ್ತು. ಅದು ಅವರನ್ನು ಕ್ರಿಯಾಶೀಲರನ್ನಾಗಿಸಿತ್ತು’ ಎಂದರು.

ಚಂದ್ರಯ್ಯ ಅವರ ಆಲೋಚನೆ, ಆಚರಣೆ ಒಂದೇ ಆಗಿತ್ತು ಎಂದು ಪ್ರೊ.ಎಸ್‌.ಶಿವರಾಜಪ್ಪ ತಿಳಿಸಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ತೋಂಟದಾರ್ಯ ಮಾತನಾಡಿ, ‘ಚಂದ್ರಯ್ಯ ಅವರು ಹಲವರ ಜಿಜ್ಞಾಸೆ ಗಳಿಗೆ ಪರಿಹಾರವನ್ನೂ ನೀಡುತ್ತಿದ್ದರು’ ಎಂದು ನೆನಪಿಸಿಕೊಂಡರು.‌

ಆಶೀರ್ವಚನ ನೀಡಿದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಚಂದ್ರಯ್ಯ ಅವರು ಪಡೆದುಕೊಂಡ ಜ್ಞಾನವನ್ನು ಸಮರ್ಥವಾಗಿ ಬಳಸಿ ಕೊಂಡರು. ಅವರ ಜ್ಞಾನ ವ್ಯವಹಾರಕ್ಕೆ ಸೀಮಿತವಾಗಿರದೆ ಮೌಲಿಕ ಸಾಹಿತ್ಯದ ರಚನೆಗೂ ಕಾರಣವಾಯಿತು’ ಎಂದು ತಿಳಿಸಿದರು.

ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ಚಂದ್ರಯ್ಯ ಅವರ ಪುತ್ರಿ ಸುಜಾತಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.