ಮೈಸೂರು: ಸಾಲ ವಾಪಸ್ ಕೊಡದ ಕಾರಣಕ್ಕೆ ಸಾಲ ಪಡೆದಿದ್ದ ವ್ಯಕ್ತಿಯ 15 ವರ್ಷದ ಪುತ್ರಿಯನ್ನೇ ವೇಶ್ಯಾವಾಟಿಕೆಗೆ ಬಳಕೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಸುರೇಶ್ ಎಂಬುವವರನ್ನು ಸೋಮವಾರ ಬಂಧಿಸಲಾಗಿದೆ.
ಕುವೆಂಪುನಗರ ಸಂಚಾರ ಠಾಣೆಯಲ್ಲಿ ಇವರು ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಪ್ರಕರಣದ ಕುರಿತು ಮಾಹಿತಿ ಇದ್ದರೂ ಮೇಲಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ ಎಂದು ಹೇಳಲಾಗಿದೆ. ಈಗಾಗಲೇ ಪ್ರಕರಣದಲ್ಲಿ ಪದ್ಮಾ ಮತ್ತು ಪ್ರಸನ್ನಕುಮಾರ್ ಎಂಬುವವರನ್ನು ಬಂಧಿಸಲಾಗಿದೆ.
ಬಾಲಕಿಯ ತಂದೆಗೆ ಆರೋಪಿಗಳು ಮೀಟರ್ ಬಡ್ಡಿಗೆ ಸಾಲ ನೀಡಿದ್ದರು. ಆದರೆ, ಬಡ್ಡಿ ಹಾಗೂ ಸಾಲದ ಹಣ ವಾಪಸ್ ಬಂದಿರಲಿಲ್ಲ. ಹೀಗಾಗಿ, ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಒಡನಾಡಿ ಸೇವಾ ಸಂಸ್ಥೆಯ ನೆರವಿನಿಂದ ಸಂತ್ರಸ್ತ ಬಾಲಕಿಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಲಾರಿ ಹರಿದು ಪಾದಚಾರಿ ಸಾವು
ಮೈಸೂರು: ಇಲ್ಲಿನ ಸಯ್ಯಾಜಿರಾವ್ ರಸ್ತೆಯಲ್ಲಿನ ಹಳೇ ಆರ್ಎಂಸಿ ವೃತ್ತದಲ್ಲಿ ಸೋಮವಾರ ಪಾದಚಾರಿಯೊಬ್ಬರ ಮೇಲೆ ಲಾರಿಯೊಂದು ಹರಿದು ಅವರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಗೆ 35ರಿಂದ 45ವರ್ಷ ಎಂದು ಗುರುತಿಸಲಾಗಿದ್ದು. ಇವರು ಗುಲಾಬಿ ಬಣ್ಣದ ಬಿಳಿ ಮತ್ತು ನೀಲಿ ಗೆರೆಗಳುಳ್ಳ ತುಂಬು ತೋಳಿನ ಅಂಗಿ, ಬಿಳಿ ಬಣ್ಣದ ಪಂಚೆ ಧರಿಸಿದ್ದಾರೆ. ಗೌರಿಬಿದನೂರಿನಿಂದ ಮೈಸೂರಿಗೆ ಬಂದಿರುವ ಕೆಎಸ್ಆರ್ಟಿಸಿ ಬಸ್ ಟಿಕೆಟ್ ಜೇಬಿನಲ್ಲಿ ದೊರಕಿದೆ. ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಮೈಸೂರು ನಗರ ಎನ್.ಆರ್.ಸಂಚಾರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಮಾಹಿತಿಗೆ: 08212418328, 9480802250 ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.