ADVERTISEMENT

ಗುಣಮುಖರಾಗುವ ಮುನ್ನವೇ ಸೋಂಕಿತ ಮನೆಗೆ

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಅಸಭ್ಯ ವರ್ತನೆ: ಆರೋಗ್ಯಾಧಿಕಾರಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 4:52 IST
Last Updated 13 ಜೂನ್ 2021, 4:52 IST

ಎಚ್.ಡಿ.ಕೋಟೆ: ತಾಲ್ಲೂಕಿನ ಸೊಳ್ಳೇಪುರದ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಮನಬಂದಂತೆ ವರ್ತಿಸುತ್ತಿದ್ದರಿಂದ ಗುಣಮುಖರಾಗುವ ಮುನ್ನವೇ ಮನೆಗೆ ಕಳುಹಿಸಲಾಗಿದೆ.

ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಸಮೀಪದ ಮಾಸ್ತಿಗುಡಿ ಪುನರ್ವಸತಿ ಕೇಂದ್ರದ ಈರಪ್ಪ ಎಂಬುವವರನ್ನು ಗುರುವಾರ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗೆ
ದಾಖಲಿಸಲಾಗಿತ್ತು.

‘ಕೊರೊನಾ ಸೋಂಕಿತ ಈರಪ್ಪ ‌ಕೋವಿಡ್‌ ಆರೈಕೆ ಕೇಂದ್ರದ ಎಲ್ಲೆಂದರಲ್ಲಿ ಓಡಾಡುತ್ತಿದ್ದರು. ಯಾರ ಮಾತನ್ನೂ ಅವರು ಕೇಳುತ್ತಿರಲಿಲ್ಲ. ಮೈಮೇಲೆ ಬಟ್ಟೆ ಸಹ
ಧರಿಸುತ್ತಿರಲಿಲ್ಲ. ಇದರಿಂದ ಅವರನ್ನು ಕುಟುಂಬದವರ ಜೊತೆ ಯಲ್ಲಿ ಕಳುಹಿಸಿದ್ದೇವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಟಿ.ರವಿ‌ ಕುಮಾರ್ ‘ಪ್ರಜಾವಾಣಿ’ಗೆ
ಪ್ರತಿಕ್ರಿಯಿಸಿದರು.

ADVERTISEMENT

‘ಸೋಂಕಿತನನ್ನು ಯಾವುದೇ ಮುಂಜಾಗ್ರತಾ ಕ್ರಮ ವಹಿಸಿದೆ ಕುಟುಂಬದವರೊಂದಿಗೆ ಮನೆಗೆ ಕಳುಹಿಸಿರುವುದು ಅಮಾನವೀಯ. ಗ್ರಾಮದವರಿಗೆ ಸೋಂಕು ಹರಡಲು ಅಧಿಕಾರಿಗಳು ಕಾರಣರಾಗಿದ್ದಾರೆ. ಈ ಮುಂಚೆ ಈರಪ್ಪ ಎಂದೂ ಹೀಗೆ ವರ್ತಿಸಿರಲಿಲ್ಲ’ ಎಂದು ಮಾಸ್ತಿಗುಡಿ ಪುನರ್ವಸತಿ ಹಾಡಿಯ ಗ್ರಾಮ ಪಂಚಾಯಿತಿ ಸದಸ್ಯ ಅಯ್ಯಪ್ಪ ತಿಳಿಸಿದರು.

‘ಘಟನೆ ಬಗ್ಗೆ ನನಗೆ ಗೊತ್ತಿಲ್ಲ, ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದು ತಹಶೀಲ್ದಾರ್‌ ಎಸ್.ಎನ್. ನರಗುಂದ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.