ADVERTISEMENT

ಕೇಂದ್ರ ಕಾರಾಗೃಹಕ್ಕೆ ತಟ್ಟಿದ ಸೋಂಕು

ಚೆಲುವಾಂಬ ಹೆರಿಗೆ ಆಸ್ಪತ್ರೆಯ ವಾರ್ಡ್ ಸೀಲ್‌ಡೌನ್‌– ನಾಲ್ವರು ಪೊಲೀಸರಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 9:02 IST
Last Updated 5 ಜುಲೈ 2020, 9:02 IST
ಹೈದರಾಬಾದ್‌ನಿಂದ ಕೆ.ಜಿ.ಕೊಪ್ಪಲಿಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್‌ ದೃಢಪಟ್ಟಿದ್ದು, ಮುಖ್ಯ ರಸ್ತೆಯನ್ನು ಸೀಲ್‌ಡೌನ್‌ ಮಾಡಲಾಗಿದೆ
ಹೈದರಾಬಾದ್‌ನಿಂದ ಕೆ.ಜಿ.ಕೊಪ್ಪಲಿಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್‌ ದೃಢಪಟ್ಟಿದ್ದು, ಮುಖ್ಯ ರಸ್ತೆಯನ್ನು ಸೀಲ್‌ಡೌನ್‌ ಮಾಡಲಾಗಿದೆ   

ಮೈಸೂರು: ಮೈಸೂರಿನ ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಯೊಬ್ಬರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ.

ಈ ವ್ಯಕ್ತಿಯನ್ನು ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಜೊತೆಗಿದ್ದ ನಾಲ್ವರನ್ನು ಜೈಲಿನಲ್ಲೇ ಕ್ವಾರಂಟೈನ್‌ ಮಾಡಲಾಗಿದೆ.

ಮೈಸೂರಿನಲ್ಲಿ ಈಚೆಗೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತ, ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ನಂತರ ಪೊಲೀಸರಿಗೆ ಶರಣಾಗಿದ್ದ. ಬೆಂಗಳೂರಿನಲ್ಲಿದ್ದ ಕಾರಣ ಆತನನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜೂನ್‌ 30ರಂದು ಗಂಟಲು ದ್ರವ ಪಡೆದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.

ADVERTISEMENT

ಹೀಗಾಗಿ, ವಿಜಯನಗರ ಠಾಣೆಯ ಪೊಲೀಸರು ಕೂಡ ಈಗ ಆತಂಕದಲ್ಲಿದ್ದಾರೆ. ನಜರಬಾದ್‌ ಠಾಣೆ ಕಾನ್‌ಸ್ಟೆಬಲ್‌ ಒಬ್ಬರಿಗೆ ಕೋವಿಡ್‌ ಇರುವುದು ಗೊತ್ತಾಗಿದೆ. ತಿ.ನರಸೀಪುರ ತಾಲ್ಲೂಕಿನ ಪೊಲೀಸರೊಬ್ಬರಿಗೆ ಸೋಂಕು ತಗುಲಿದೆ.

ಬಾಣಂತಿಗೆ ಕೋವಿಡ್‌: ನಾಲ್ಕು ದಿನಗಳ ಹಿಂದೆ ಹೆರಿಗೆಗಾಗಿ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯರೊಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಐಸೊಲೇಷನ್‌ ವಾರ್ಡ್‌ಅನ್ನು ಸೀಲ್‌ಡೌನ್‌ ಮಾಡಲಾಗಿದೆ. ಅವರು ಶುಕ್ರವಾರ ರಾತ್ರಿಯಷ್ಟೇ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗುವನ್ನು ‘ಕೋವಿಡ್‌ ಹೆರಿಗೆ ಆಸ್ಪತ್ರೆ’ಗೆ ಸ್ಥಳಾಂತರಿಸಲಾಗಿದೆ. ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದ ಐವರು ಮಹಿಳೆಯರಲ್ಲಿ ಇದುವರೆಗೆ ಸೋಂಕು ಪತ್ತೆಯಾಗಿದೆ.

ಮುಖ್ಯರಸ್ತೆಯೇ ಬಂದ್‌: ಕೆ.ಜಿ.ಕೊಪ್ಪಲಿನ ಮುಖ್ಯರಸ್ತೆಯನ್ನೇ ಸೀಲ್‌ಡೌನ್‌ ಮಾಡಲಾಗಿದೆ. ಹೈದರಾಬಾದ್‌ನಿಂದ ಬಂದಿದ್ದ ವ್ಯಕ್ತಿಗೆ ಸೋಂಕು ಇರುವುದು ಗೊತ್ತಾಗಿದೆ. ಆ ವ್ಯಕ್ತಿ ಇದ್ದ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಕ್ವಾರಂಟೈನ್‌ಗೆ ಹೆದರಿ ಪರಾರಿಯಾಗಿದ್ದ ಸಂಪರ್ಕಿತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.