ADVERTISEMENT

ಮತ್ತೊಂದು ಕ್ರಿಕೆಟ್‌ ಬೆಟ್ಟಿಂಗ್‌ ಜಾಲ ಬೇಧಿಸಿದ ಪೊಲೀಸರು

ಕುವೆಂಪುನಗರ ಪೊಲೀಸರ ಕಾರ್ಯಾಚರಣೆ; ನಾಲ್ವರ ಬಂಧನ,

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 19:54 IST
Last Updated 5 ಏಪ್ರಿಲ್ 2019, 19:54 IST

ಮೈಸೂರು: ವಿಜಯನಗರ ಠಾಣೆ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್‌ ದಂಧೆಯ ವಿರುದ್ಧ ಕಾರ್ಯಾಚರಣೆ ನಡೆಸಿ 9 ಮಂದಿಯನ್ನು ಬಂಧಿಸಿದ ಬೆನ್ನಲ್ಲೇ ಕುವೆಂಪುನಗರ ಠಾಣೆಯ ಪೊಲೀಸರೂ ಬೆಟ್ಟಿಂಗ್ ನಿರತರಾಗಿದ್ದ ನಾಲ್ವರನ್ನು ಬಂಧಿಸಿದ್ದಾರೆ.

ದಟ್ಟಗಳ್ಳಿ 3ನೇ ಹಂತದ ಕನಕದಾಸನಗರದ ಮುಖ್ಯರಸ್ತೆಯಲ್ಲಿನ ಕಟ್ಟಡವೊಂದರಲ್ಲಿರುವ ಚಹಾದಂಗಡಿ ಮೇಲೆ ದಾಳಿ ಮಾಡಿದ ಪೊಲೀಸರು ಐಪಿಎಲ್‌ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ನಿರತರಾಗಿದ್ದ ನಾಲ್ವರನ್ನು ಬಂಧಿಸಿ, ₹ 28,500 ಹಣ, 4 ಮೊಬೈಲ್‌ ಮತ್ತು ಒಂದು ಟಿ.ವಿಯನ್ನು ವಶಪಡಿಸಿಕೊಂಡಿದ್ದಾರೆ.

ಅಂಗಡಿ ಮಾಲೀಕ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಹುರುಳಿಕ್ಯಾತನಹಳ್ಳಿ ಗ್ರಾಮದ ಎನ್.ಹರೀಶ್, ಅರವಿಂದ, ಸರಗೂರು ಹೋಬಳಿಯ ನಾಜೀಪುರದ ಉಮೇಶ್, ಚಾಮರಾಜನಗರದ ಹೌಸಿಂಗ್ ಬೋರ್ಡ್‌ ನಿವಾಸಿ ಡಾಮಿನಿಕ್ ಆದರ್ಶ ಬಂಧಿತರು.

ADVERTISEMENT

ಇವರು ಸನ್‌ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯಕ್ಕೆ ಹಣವನ್ನು ಬೆಟ್‌ ಕಟ್ಟಿಕೊಂಡು ಆಡುತ್ತಿದ್ದರು. ಚಹಾದಂಗಡಿ ಮಾಲೀಕ ಹರೀಶ್ ಈ ದಂಧೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಆರ್.ಠಾಣೆ ವಿಭಾಗದ ಎಸಿಪಿ ಗೋಪಾಲಕೃಷ್ಣ ಟಿ.ನಾಯಕ್‍ ಅವರ ನೇತೃತ್ವದಲ್ಲಿ ಕುವೆಂಪುನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಿ.ಸಿ.ರಾಜು, ಸಬ್‍ಇನ್‌ಸ್ಪೆಕ್ಟರ್ ಕೆ.ರಘು ಸಿಬ್ಬಂದಿಯಾದ ಮಹೇಂದ್ರ, ಯೋಗೇಶ್, ಆದರ್ಶ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

ಅಂಗಡಿಯ ಕಳ್ಳತನ:

ಮೈಸೂರು: ಇಲ್ಲಿನ ಸಯ್ಯಾಜಿರಾವ್ ರಸ್ತೆಯ ಸಾದಿಕ್ ಉಲ್ಲಾ ಅವರ ಜವಳಿ ಅಂಗಡಿಯ ಚಾವಣಿಯ ಗ್ರಿಲ್ ಮುರಿದು ಒಳ ನುಗ್ಗಿರುವ ಕಳ್ಳರು ₹ 20 ಸಾವಿರ ಹಣವನ್ನು ಕಳವು ಮಾಡಿದ್ದಾರೆ.

ಸಾದಿಕ್ ಉಲ್ಲಾ ಅವರು ಬುಧವಾರ ವ್ಯಾಪಾರ ಮುಗಿಸಿ ರಾತ್ರಿ ಅಂಗಡಿ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಗುರುವಾರ ಬೆಳಿಗ್ಗೆ ಬರುವಷ್ಟರಲ್ಲಿ ಚಾವಣಿಗೆ ಹಾಕಿದ್ದ ಗ್ರಿಲ್‌ನ್ನು ಒಡೆದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದೇವರಾಜ ಠಾಣೆಯಲ್ಲಿ ದಾಖಲಾಗಿದೆ.

ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಹರಿದ ಕಾರು

ಮೈಸೂರು: ಇಲ್ಲಿನ ಬೋಗಾದಿ ಮುಖ್ಯ ರಸ್ತೆಯನ್ನು ದಾಟುತ್ತಿದ್ದ ಬಡಾವಣೆಯ ನಿವಾಸಿ ಡಿ.ಲೋಕೇಶ್ ಎಂಬುವವರ ಮೇಲೆ ಕಾರೊಂದು ಹರಿದು ಮೃತಪಟ್ಟಿದ್ದಾರೆ.

ಅವರು ರಾತ್ರಿ 8.30ರಲ್ಲಿ ಬೋಗಾದಿ ಮುಖ್ಯ ರಸ್ತೆಯಿಂದ ಆರ್‍ಐಇ ಕ್ಯಾಂಪಸ್ ಕಾಂಪೌಡ್ ಕಡೆಗೆ ರಸ್ತೆ ದಾಟುತ್ತಿದ್ದ ವೇಳೆ ಮೈಸೂರು ಕಡೆಯಿಂದ ಬರುತ್ತಿದ್ದ ಹುಂಡೈ ಕಾರೊಂದು ಡಿಕ್ಕಿ ಹೊಡೆದು, ಅವರ ಮೇಲೆ ಹರಿದಿದೆ. ಇದರಿಂದ ಇವರಿಗೆ ತಲೆ ಮತ್ತು ಹೊಟ್ಟೆಯ ಮೇಲೆ ಗಂಭೀರ ಗಾಯಗಳಾಗಿವೆ. ಆದರೆ, ಕಾರಿನ ಚಾಲಕ ನಿಲ್ಲಿಸದೇ ಹೊರಟಿದ್ದಾನೆ. ಈ ವೇಳೆ ಸಾರ್ವಜನಿಕರು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಲೋಕೇಶ್ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.