ADVERTISEMENT

ಲೋಕಅದಾಲತ್‌ಗೆ ಉತ್ತಮ ಸ್ಪಂದನೆ

3,322 ಪ್ರಕರಣಗಳು ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 20:02 IST
Last Updated 13 ಜುಲೈ 2019, 20:02 IST

ಮೈಸೂರು: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಬಾರಿ ಒಟ್ಟು 3,322 ಪ್ರಕರಣಗಳು ಇತ್ಯರ್ಥಗೊಂಡಿವೆ. ಕಳೆದ ಲೋಕಅದಾಲತ್‌ನಲ್ಲಿ ಕೇವಲ 1,400 ಪ್ರಕರಣಗಳಷ್ಟೇ ಬಗೆಹರಿದಿದ್ದವು.

ಒಟ್ಟು 11,186 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇವುಗಳನ್ನು 50 ಬೆಂಚ್‌ಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಸಂಧಾನ ಪ್ರಕ್ರಿಯೆ ನಡೆಸಲಾಯಿತು.

ADVERTISEMENT

1,753 ವಿಚಾರಣಾ ಪೂರ್ವ ಪ್ರಕರಣಗಳಲ್ಲಿ 116 ಪ್ರಕರಣಗಳು ಇತ್ಯರ್ಥಗಂಡರೆ, 9,433 ಬಾಕಿ ಪ್ರಕರಣಗಳಲ್ಲಿ 3,206 ಪ್ರಕರಣಗಳು ಇತ್ಯರ್ಥಗೊಂಡವು.

ಇವುಗಳಲ್ಲಿ ಚೆಕ್‌ಬೌನ್ಸ್‌ ಪ್ರಕರಣಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಇದನ್ನು ಬಿಟ್ಟರೆ, ರಾಜಿಯಾಗಬಲ್ಲ ಹಾಗೂ 2 ವರ್ಷಕ್ಕಿಂತ ಕಡಿಮೆ ಅವಧಿಗೆ ಶಿಕ್ಷೆಯಾಗಬಲ್ಲ ಕ್ರಿಮಿನಲ್‌ ಪ್ರಕರಣಗಳು, ಸಿವಿಲ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪ್ರಕರಣಗಳು, ಕೌಟುಂಬಿಕ, ದೌರ್ಜನ್ಯ ತಡೆ ಕಾಯ್ದೆ ಪ್ರಕರಣಗಳು, ಜೀವನಾಂಶ ಪ್ರಕರಣಗಳನ್ನು ಇತ್ಯರ್ಥಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಫೆಬ್ರುವರಿ ಮತ್ತು ಏಪ್ರಿಲ್‌ನಲ್ಲಿ 2 ಲೋಕಅದಾಲತ್‌ಗಳು ನಡೆದಿದ್ದವು. ಇಲ್ಲಿ ಸುಮಾರು 2 ಸಾವಿರ ಪ್ರಕರಣಗಳು ಇತ್ಯರ್ಥಗೊಂಡಿದ್ದವು. ಈ ಬಾರಿಯೂ ಸುಮಾರು ಒಂದು ಸಾವಿರಕ್ಕೂ ಅಧಿಕ ಪ್ರಕರಣಗಳು ಬಗೆಹರಿಯುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ 3,322 ಪ್ರಕರಣಗಳು ಇತ್ಯರ್ಥಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.