ADVERTISEMENT

ವಾಸ್ತು ನೆವದಲ್ಲಿ ಕಳ್ಳತನ; ಆರೋಪಿ ಬಂಧನ

ಕುಬೇರನ ಮೂಲೆಯಲ್ಲಿ ಆಮೆ ಇಟ್ಟರೆ ಒಳ್ಳೆಯದೆಂದು ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:13 IST
Last Updated 13 ಜೂನ್ 2019, 20:13 IST

ಮೈಸೂರು: ಕುಬೇರನ ಮೂಲೆಯಲ್ಲಿ ಆಮೆ ವಿಗ್ರಹ ಇಟ್ಟರೆ ಒಳ್ಳೆಯದೆಂದು ಹೇಳಿ ಆಮೆ ವಿಗ್ರಹ ಇಡುವ ನೆವದಲ್ಲಿ ₹ 2 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿ ಸರಸ್ವತಿಪುರಂನ ಅಕ್ಷಯ್.ಪಿ.ಪದಕಿ (26) ಎಂಬಾತನನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಈತ ಜೂನ್ 6ರಂದು ಕೃಷ್ಣಮೂರ್ತಿಪುರಂನಲ್ಲಿ ಇರುವ ವಿಜಯಲಕ್ಷ್ಮೀ ಎಂಬವರ ಮನೆಯಲ್ಲಿ ವಾಸ್ತುಪ್ರಕಾರ ವಸ್ತುಗಳನ್ನು ಜೋಡಿಸಿಡುತ್ತೇನೆಂದು ಆಮೆ ವಿಗ್ರಹವನ್ನು ಕುಬೇರನ ಮೂಲೆಯಲ್ಲಿ ಇಡಬೇಕು ಎಂದು ಹೇಳಿ ಬೀರುವಿನ ಬೀಗ ತೆಗೆಸಿದ್ದಾನೆ. ನಂತರ, ಕುಡಿಯಲು ನೀರು ಕೇಳಿ 30 ಗ್ರಾಂ ಚಿನ್ನ, 420 ಗ್ರಾಂ ಬೆಳ್ಳಿಯನ್ನು ಕಳವು ಮಾಡಿದ್ದ.

ಈತ ಹೋದ ಮೇಲೆ ಕಳವಾಗಿರುವುದು ಗೊತ್ತಾಗಿದೆ. ನಂತರ, ವಿಜಯಲಕ್ಷ್ಮೀ ಅವರು ದೂರು ದಾಖಲಿಸಿದ್ದರು.

ADVERTISEMENT

ಈತ ಕೇವಲ ಮೈಸೂರು ಮಾತ್ರವಲ್ಲದೇ ಬೆಂಗಳೂರು, ಮೇಲುಕೋಟೆ ಹಾಗೂ ಇತರ ಕಡೆಗಳಲ್ಲೂ ವಾಸ್ತುಪ್ರಕಾರ ಮನೆಯಲ್ಲಿರುವ ಪರಿಕರಗಳನ್ನು ಜೋಡಿಸಿಡುತ್ತೇನೆಂದು ಹೇಳಿ ಇದೇ ರೀತಿಯ ಕೃತ್ಯಗಳನ್ನು ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಆರ್.ವಿಭಾಗದ ಎಸಿಪಿ ಗೋಪಾಲಕೃಷ್ಣ.ಟಿ. ನಾಯಕ, ಇನ್‌ಸ್ಪೆಕ್ಟರ್ ಹರಿಯಪ್ಪ , ಎಎಸ್‌ಐ ಗೌರಿಶಂಕರ ಹಾಗೂ ಸಿಬ್ಬಂದಿ ರಾಜು ,ಪುಟ್ಟಸ್ವಾಮಿ, ಸುದೀಪ್ ಕುಮಾರ್, ಸಿದ್ದಾಪ್ಪಾಜಿ, ಕುಮಾರ್, ಸ್ವಾಮಿ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.