ADVERTISEMENT

ಮೈಸೂರು | ರೈತ ಆತ್ಮಹತ್ಯೆ: ತಳಮಟ್ಟದಲ್ಲಿ ಮಾಹಿತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 13:02 IST
Last Updated 3 ಫೆಬ್ರುವರಿ 2023, 13:02 IST
ಡಾ.ಕೆ.ವಿ.ರಾಜೇಂದ್ರ
ಡಾ.ಕೆ.ವಿ.ರಾಜೇಂದ್ರ   

ಮೈಸೂರು: ‘ರೈತರ ಆತ್ಮಹತ್ಯೆ ಪ್ರಕರಣ ದಾಖಲಾದ ಸಂದರ್ಭದಲ್ಲಿ ಪೊಲೀಸರು ಸಂಪೂರ್ಣವಾಗಿ ಪರಾಮರ್ಶಿಸಿ ಎಫ್.ಐ.ಆರ್. ದಾಖಲಿಸಬೇಕು. ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಹಕಾರ ಇಲಾಖೆಯ ಸಹಾಯಕ ನಿಬಂಧಕರು ಜಂಟಿಯಾಗಿ ತಳಮಟ್ಟದಲ್ಲಿ ಮಾಹಿತಿ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ತಾಲ್ಲೂಕಿನ ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶುಕ್ರವಾರ ರೈತರ ಆತ್ಮಹತ್ಯೆ, ಹಾವು ಕಡಿತ ಹಾಗೂ ಇತರ ಆಕಸ್ಮಿಕ ಮರಣಗಳ ಜಿಲ್ಲಾ ಮಟ್ಟದ ಮೇಲ್ಮನವಿ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಗೆ ಒಟ್ಟು 29 ರೈತ ಉತ್ಪಾದಕ ಸಂಸ್ಥೆಗಳ ಗುರಿಯನ್ನು ಸಾಧಿಸಲಾಗಿದೆ. 2022-23ನೇ ಸಾಲಿಗೆ 12 ಹೊಸ ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸಲು ಅನುಮೋದನೆ ನೀಡಲಾಗಿದೆ. ಪ್ರಸ್ತುತ ಎಂಒಯು (ಒಪ್ಪಂದ) ಆಗಿ, ಹೆಚ್ಚು ಸದಸ್ಯರನ್ನು ನೋಂದಾಯಿಸದಿರುವ ಸರ್ಕಾರೇತರ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸಮಗ್ರ ಜಿಲ್ಲಾ ನೀರಾವರಿ ಸಮಿತಿ ಯೋಜನೆಯ ಪ್ರಕಾರ ತುಂತುರು ಹಾಗೂ ಹನಿ ನೀರಾವರಿ ಘಟಕಗಳಿಗೆ ಅನುಮೋದನೆ ನೀಡಲಾಯಿತು.

‘ಕರ್ನಾಟಕ ರೈತ ಸುರಕ್ಷಾ ಪಧಾನ ಮಂತ್ರಿ ಫಸಲ್ ಭಿಮಾ ವಿಮಾ ಯೋಜನೆಯಡಿ 2020-21ನೇ ಸಾಲಿನಲ್ಲಿ 152 ಫಲಾನುಭವಿಗಳ ಖಾತೆಗೆ ಹಣ ಪಾವತಿಯಾಗದೇ ಬಾಕಿ ಉಳಿದಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 4 ಪ್ರಕರಣಗಳಿಗೆ ಹಣ ಪಾವತಿಸಲಾಗುತ್ತಿದೆ’ ಎಂದರು.

ಎಸ್ಪಿ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.