ಬೆಟ್ಟದಪುರ: ‘ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸರ್ಕಾರ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಮಾಡುತ್ತಿದ್ದು, ಇದು ಕಾಟಾಚಾರದ ಕಾರ್ಯಕ್ರಮ ಆಗದಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು’ ಎಂದು ಶಾಸಕ ಕೆ.ಮಹದೇವ್ ಸೂಚಿಸಿದರು.
ಸಮೀಪದ ಹಾರನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿಯಿಂದ ಶುಕ್ರವಾರ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾರ್ವಜನಿಕರು ತಾಲ್ಲೂಕು ಕಚೇರಿ ಅಲೆಯುವ ಬದಲು ತಮ್ಮ ಸಮಸ್ಯೆಗಳನ್ನು ಇಂಥ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಮೂಲಕ ಸದುಪ ಯೋಗ ಮಾಡಿಕೊಳ್ಳಬೇಕು’ ಎಂದರು.
‘ಎಲ್ಲಾ ಇಲಾಖೆ ಅಧಿಕಾರಿಗಳು ಬರುವುದರಿಂದ ಸಾರ್ವಜನಿಕರಿಗೆ ನೇರ ಸಂಪರ್ಕಕ್ಕೆ ಸಿಗಲಿದ್ದಾರೆ. ಆದ್ದರಿಂದ ತಮ್ಮ ಸಮಸ್ಯೆಗಳಿಗೆ ನೇರವಾಗಿ ಪರಿಹಾರ ಕಂಡುಕೊಳ್ಳುವುದಕ್ಕೆ ಅನುಕೂಲಕರ ವೇದಿಕೆಯಾಗಿದೆ. ಇದನ್ನು ರೈತಾಪಿ ವರ್ಗದವರು ಉಪ ಯೋಗ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಸರ್ಕಾರಿ ಜಾಗ ಒತ್ತುವರಿ ತೆರವು, ಕೆರೆ ಏರಿ ನಿರ್ಮಾಣ, ಪಂಚಾಯಿತಿ ಮನೆ ಕೋರಿ ಅರ್ಜಿ, ವಿದ್ಯುತ್ ಸಮಸ್ಯೆ, ಜಮೀನಿನ ಖಾತೆ ಬದಲಾವಣೆ, ಆಶ್ರಯ ಮನೆ ನಿರ್ಮಾಣದ ಬಿಲ್ ಬಾಕಿ ಉಳಿದಿರುವುದು ಸೇರಿದಂತೆ 40ಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ 525 ಮಂದಿ ಪಿಂಚಣಿ ಫಲಾನುಭವಿಗಳಿಗೆ ಪತ್ರ ವಿತರಿಸಲಾಯಿತು.
ಹಾರನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶೇಖರ್, ಕೊಪ್ಪ ಗ್ರಾ.ಪಂ ಅಧ್ಯಕ್ಷ ರೇಣುಕಸ್ವಾಮಿ, ಬೆಣಗಾಲು ಗ್ರಾ.ಪಂ ಉಪಾಧ್ಯಕ್ಷ ಧನರಾಜ್, ತಹಶೀಲ್ದಾರ್ ಕೆ.ಚಂದ್ರಮೌಳಿ, ಇ.ಒ ಸಿ.ಆರ್.ಕೃಷ್ಣಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೆಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಉಪತಹಶೀಲ್ದಾರ್ ಮಹೇಶ್, ಕಂದಾಯ ನಿರೀಕ್ಷ ಎನ್.ಕೆ ಪ್ರದೀಪ್, ಸಿಡಿಪಿಒ ಮಮತಾ, ಪಿಡಿಒ ಬಿ.ಪಿ ಧನಂಜಯ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.