ಮೈಸೂರು: ಉತ್ತರ ಪ್ರದೇಶದ ಲಖನೌ ಸಮೀಪ ನಡೆದ ಅಪಘಾತದಲ್ಲಿ ಮೃತಪಟ್ಟ ರಂಗಕರ್ಮಿ ಮುದ್ದುಕೃಷ್ಣ ಹಾಗೂ ಪತ್ನಿ ಇಂದ್ರಾಣಿ ಅವರ ಅಂತ್ಯಕ್ರಿಯೆಯು ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಯಾವುದೇ ಧಾರ್ಮಿಕ ವಿಧಿವಿಧಾನ ಇಲ್ಲದೇ ಬುಧವಾರ ನೆರವೇರಿತು. ಇವರ ಪುತ್ರರಾದ ಅನನ್ಯ ಮತ್ತು ಅಲೋಕ ಸೇರಿದಂತೆ ಹಲವು ಮಂದಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ಇದಕ್ಕೂ ಮುನ್ನ ಮಂಗಳವಾರ ರಾತ್ರಿ ನಗರಕ್ಕೆ ಪಾರ್ಥಿವ ಶರೀರಗಳನ್ನು ತರಲಾಯಿತು. ಬುಧವಾರ ಬೆಳಿಗ್ಗೆ ಕಲಾಮಂದಿರದ ಕಿಂದರಿಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಮುದ್ದುಕೃಷ್ಣ ಅವರು ಧರ್ಮದರ್ಶಿಯಾಗಿದ್ದ ನೃಪತುಂಗ ಶಾಲೆಯ ಮಕ್ಕಳು ಅಂತಿಮ ದರ್ಶನ ಪಡೆದರು. ಇವರೊಂದಿಗೆ ಸಾಹಿತಿಗಳಾದ ದೇವನೂರ ಮಹಾದೇವ,ಪ್ರೊ.ಕೆ.ಎಸ್.ಭಗವಾನ್, ಚ.ಸರ್ವಮಂಗಳಾ, ಹೋರಾಟಗಾರ ಪ.ಮಲ್ಲೇಶ್, ರಂಗಾಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ,ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್,ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ,ಸಿಎಫ್ಟಿಆರ್ಐ ನಿರ್ದೇಶಕ ಎಸ್ಕೆಎಂಎಸ್ ರಾಘವ್,ಲೇಖಕರಾದ ಸಿ.ನಾಗಣ್ಣ, ಜಿ.ಪಿ.ಬಸವರಾಜು, ನಾ.ದಿವಾಕರ್, ನಟ ‘ಡಾಲಿ’ ಧನಂಜಯ್ ಸೇರಿದಂತೆ ನೂರಾರು ಮಂದಿ ದರ್ಶನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.