ADVERTISEMENT

ರೇಷ್ಮೆ ಇಳುವರಿ ಕುಸಿತ: ಪರಿಶೀಲನೆ

ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಯನ ಸಮಿತಿ ಸಿಎಸ್‌ಆರ್‌ಟಿಐಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 15:41 IST
Last Updated 19 ಡಿಸೆಂಬರ್ 2023, 15:41 IST
ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಡಾ.ಎಸ್.ಬಿ.ದಂಡಿನ್ ಮಾತನಾಡಿದರು. ಎಸ್‌.ಗಾಂಧಿದಾಸ್‌, ಎಚ್‌.ಕೆ.ಬಸವರಾಜ ಪಾಲ್ಗೊಂಡಿದ್ದರು
ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಡಾ.ಎಸ್.ಬಿ.ದಂಡಿನ್ ಮಾತನಾಡಿದರು. ಎಸ್‌.ಗಾಂಧಿದಾಸ್‌, ಎಚ್‌.ಕೆ.ಬಸವರಾಜ ಪಾಲ್ಗೊಂಡಿದ್ದರು   

ಮೈಸೂರು: ರೇಷ್ಮೆಗೂಡು ಉತ್ಪಾದನೆ ಕುಸಿತದ ಕಾರಣಗಳ ಅಧ್ಯಯನಕ್ಕೆ ಕೇಂದ್ರ ರೇಷ್ಮೆ ಮಂಡಳಿ ರಚಿಸಿರುವ ಉನ್ನತ ಮಟ್ಟದ ಸಮಿತಿಯು ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ (ಸಿಎಸ್‌ಆರ್‌ಟಿಐ) ಮಂಗಳವಾರ ಭೇಟಿ ನೀಡಿ ಸಭೆ ನಡೆಸಿತು.

ಸಮಿತಿ ಅಧ್ಯಕ್ಷ, ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ್ ಅವರು, ರೇಷ್ಮೆ ಕೃಷಿಯಲ್ಲಿ ಹುಳು ಗೂಡು ಕಟ್ಟದಿರುವ ಹಾಗೂ ರೇಷ್ಮೆ ಕೃಷಿ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ನಡೆಸಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ನಂತರ ಮಾತನಾಡಿದ ಅವರು, ‘ರಾಜ್ಯದ ಬೇರೆ ಬೇರೆ ವಲಯಗಳ ರೈತರ ಹಿಪ್ಪುನೇರಳೆ ತೋಟಗಳಿಂದ ಮಣ್ಣು ತಂದು ಪರೀಕ್ಷೆ ಮಾಡಬೇಕು. ಎಲ್ಲ ಚಾಕಿ ಕೇಂದ್ರಗಳನ್ನು ಪರಿಶೀಲಿಸಬೇಕು. ಮತ್ತಷ್ಟು ಸಂಶೋಧನೆ ನಡೆಸಿ ಪ್ರಾಯೋಗಿಕ ವರದಿಯನ್ನು ಸಮಿತಿಗೆ ಸಲ್ಲಿಸಬೇಕು’ ಎಂದು ಸೂಚಿಸಿದರು. 

ADVERTISEMENT

ಸಂಸ್ಥೆಯ ನಿರ್ದೇಶಕ ಎಸ್.ಗಾಂಧಿದಾಸ್ ಮಾತನಾಡಿ, ‘ರೇಷ್ಮೆ ಗೂಡು ಉತ್ಪಾದನೆಯ ಕುಸಿತಕ್ಕೆ ಹಿಪ್ಪುನೇರಳೆ ಕೃಷಿಗೆ ತಜ್ಞರು ಶಿಫಾರಸು ಮಾಡದ ಕೀಟನಾಶಕಗಳ ಬಳಕೆಯೇ ಕಾರಣವಾಗಿದೆ’ ಎಂದರು.

‘ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಹಾಸನ, ಕೋಲಾರ, ಚಿತ್ರದುರ್ಗ ಸೇರಿದಂತೆ ರೇಷ್ಮೆ ಬೆಳೆಯುವ ಜಿಲ್ಲೆಗಳು ಹಾಗೂ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ರೇಷ್ಮೆಗೂಡು ಕಟ್ಟದಿರುವ ಬಗ್ಗೆ ಸಂಸ್ಥೆಯು ಅಧ್ಯಯನ ನಡೆಸಿದೆ’ ಎಂದು ಮಾಹಿತಿ ನೀಡಿದರು.

ಸದಸ್ಯರಾದ ನಿರ್ಮಲ್ ಕುಮಾರ್, ಮುನಿರಾಜು, ಎನ್‌.ವೈ.ಚಿಗರಿ, ಎಚ್.ಕೆ.ಬಸವರಾಜು, ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕರಾದ ಡಾ.ಎಸ್.ಮಂಥಿರ ಮೂರ್ತಿ, ವಿಜ್ಞಾನಿಗಳಾದ ಡಾ.ಕೆ.ಬಿ.ಚಂದ್ರಶೇಖರ್‌, ಡಾ.ಎಸ್.ಬಾಲಸರಸ್ವತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.