ಮೈಸೂರು: ‘ಕುವೆಂಪು ವ್ಯಕ್ತಿತ್ವಕ್ಕೆ ದಾರ್ಶನಿಕ ಪದ ಹೆಚ್ಚು ಸೂಕ್ತ. ಆ ಕಾಲದ ಸಾಹಿತಿಗಳಲ್ಲಿಯೇ ಅವರೊಬ್ಬ ಒಂಟಿ ಸಲಗ’ ಎಂದು ಮೈಸೂರು ವಿಶ್ವವಿದ್ಯಾಲಯ ಕಲಾ ನಿಕಾಯದ ಡೀನ್ ಪ್ರೊ.ಎಂ.ಎಸ್.ಶೇಖರ್ ಹೇಳಿದರು.
ಅದಮ್ಯ ರಂಗಶಾಲೆ ಮತ್ತು ಪರಿಷತ್ತಿನ ಜಿಲ್ಲಾ ಘಟಕವು ನಾಡೋಜ ದೇಜಗೌ ಸಂಸ್ಮರಣೆ ಪ್ರಯುಕ್ತ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ ಪ್ರದಾನ ಹಾಗೂ ಶಿಕ್ಷಕ ಕವಿಗಳ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
‘ಇಡೀ ವಿಶ್ವಕ್ಕೆ ವಿಶ್ವಮಾನವ ಸಂದೇಶ ಸಾರಿದ ಅವರ ಅಸ್ಮಿತೆ ಮರೆಯಾಗದಂತೆ ನೋಡಿಕೊಳ್ಳಬೇಕು. ಅಂದಿನ ಸಚಿವ ಬಸವಲಿಂಗಪ್ಪ, ಕನ್ನಡ ಸಾಹಿತ್ಯದಲ್ಲಿ ಬೂಸಾ ಇದೆ ಎಂದು ಹೇಳಿದ್ದು ವರದಿಯಾಗಿ ರಾಜ್ಯ ಹೊತ್ತಿ ಉರಿಯಿತು. ಅವರ ರಾಜೀನಾಮೆಯನ್ನೂ ಪಡೆಯಲಾಯಿತು. ಅಂಥ ಸಂದರ್ಭದಲ್ಲೂ ಅವರ ಪರ ನಿಂತ ಏಕೈಕ ಕವಿ ಕುವೆಂಪು ‘ಅವರು ಹೇಳಿದ್ದು ಸತ್ಯ’ ಎಂದರು. ಬೇರೆಯವರು ಏಕೆ ಮುಂದಾಗಲಿಲ್ಲ’ ಎಂದು ಪ್ರಶ್ನಿಸಿದರು.
ಅದಮ್ಯ ರಂಗಶಾಲೆ ಕಾರ್ಯದರ್ಶಿ ಸತೀಶ್ ಜವರೇಗೌಡ ಮಾತನಾಡಿ, ‘ದೇಜಗೌ ಕನ್ನಡದಲ್ಲಿ 350ಕ್ಕೂ ಹೆಚ್ಚು ಪುಸ್ತಕ ಬರೆದವರು’ ಎಂದರು.
ಪ್ರಶಸ್ತಿ ಪುರಸ್ಕೃತರು: ಪ್ರಾಂಶುಪಾಲರಾದ ಮೈಸೂರು ದೇವರಾಜ ಸರ್ಕಾರಿ ಪಿಯು ಕಾಲೇಜಿನ ಎಂ.ಜಿ.ರಮಾನಂದ, ಎಚ್.ಡಿ.ಕೋಟೆ ತುಂಬಸೋಗೆ ಎಂಎಂಕೆ ಸ್ವತಂತ್ರ ಪಿಯು ಕಾಲೇಜಿನ ಎಸ್.ಪಿ.ಪ್ರಕಾಶ್, ಅರಕಲಗೂಡಿನ ಬಿಜಿಎಸ್ ಪಿಯು ಕಾಲೇಜಿನ ಎಚ್.ಬಿ.ಮಹೇಶ್, ಉಪನ್ಯಾಸಕರಾದ, ಮೈಸೂರಿನ ಕುವೆಂಪುನಗರದ ಸರ್ಕಾರಿ ಪಿಯು ಕಾಲೇಜಿನ ಎಂ.ಮಹೇಶ, ಬನ್ನೂರಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಸಿ.ಚಲುವಮ್ಮ, ಮಹಾರಾಜ ಸರ್ಕಾರಿ ಪಿಯು ಕಾಲೇಜಿನ ಕೆ.ಎನ್.ಷಣ್ಮುಖ, ಹುಣಸೂರಿನ ಸಂತ ಜೋಸೆಫರ ಪಿಯು ಕಾಲೇಜಿನ ಕೆ.ನಂಜುಂಡಸ್ವಾಮಿ ಹಾಗೂ ತುಮಕೂರಿನ ಸರ್ಕಾರಿ ಪಿಯು ಕಾಲೇಜಿನ ರವಿಕುಮಾರ್ ನೀಹ ಅವರಿಗೆ ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರೊ.ಡಿ.ಕೆ.ರಾಜೇಂದ್ರ, ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ.ರಾಮೇಗೌಡ, ರಂಗಶಾಲೆ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.