ಮೈಸೂರು: ‘ನಗರದ ಮಂಡಿ ಮೊಹಲ್ಲಾದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಈವರೆಗೆ ₹ 6.50 ಕೋಟಿ ಅನುದಾನ ನೀಡಿದ್ದೇನೆ’ ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದರು.
ವಾರ್ಡ್ ನಂ. 24 ಹಾಗೂ 25ರ ಕೈಲಾಸಪುರಂ 6ನೇ ಕ್ರಾಸ್ 3ನೇ ಮುಖ್ಯರಸ್ತೆ, ಸಯ್ಯಾಜಿರಾವ್ ರಸ್ತೆ, ಪಂಚಮುಖಿ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಮಹಾತ್ಮಗಾಂಧಿ ನಗರವಿಕಾಸ ಯೋಜನೆಯಲ್ಲಿ ₹ 2 ಕೋಟಿ ಅನುದಾನದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಮಂಡಿ ಮೊಹಲ್ಲಾ ಎಂದರೆ ಸರ್ವ ಜನಾಂಗದ ಶಾಂತಿಯ ತೋಟ. ಇದು ಹಿಂದೂ–ಮುಸ್ಲಿಮರ ಭಾವೈಕ್ಯ ಕೇಂದ್ರವೂ ಹೌದು. ಅಂತೆಯೇ ಹಲವು ಸಮಾಜದವರು ಇಲ್ಲಿ ಸೌಹಾರ್ದದಿಂದ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಅಭಿವೃದ್ಧಿಗೆ ಬದ್ಧವಾಗಿದ್ದು, ಮತ್ತಷ್ಟು ಅನುದಾನ ತರುವುದಕ್ಕೆ ಉತ್ಸುಕವಾಗಿದ್ದೇನೆ’ ಎಂದರು.
ಮಹಾನಗರಪಾಲಿಕೆ ವಾರ್ಡ್ ನಂ.25ರ ಸದಸ್ಯ ರಂಗಸ್ವಾಮಿ ಹಾಗೂ 24ರ ಸದಸ್ಯೆ ರಮಣಿ, ಕಾರ್ಯಪಾಲಕ ಎಂಜಿನಿಯರ್ ರಂಜಿತ್ ಕುಮಾರ್, ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಎಂಜಿನಿಯರ್ಗಳಾದ ಮೋಹನ್, ಕೃಷ್ಣಮೂರ್ತಿ, ಮುಖಂಡ ದಾಸಪ್ರಕಾಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ, ಉಪಾಧ್ಯಕ್ಷ ಕುಮಾರಗೌಡ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಜುನ್, ವಾರ್ಡ್ ಅಧ್ಯಕ್ಷ ವಿನಯ್ ಕುಮಾರ್, ಜೀವಧಾರ ಟ್ರಸ್ಟ್ನ ಗಿರೀಶ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.