ಹುಣಸೂರು: ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡು ಮೇವು ತಿನ್ನದೆ ಅನಾರೋಗ್ಯಕ್ಕೆ ತುತ್ತಾಗುತ್ತಿವೆ ಎಂದು ಕಟ್ಟೆಮಳಲವಾಡಿ ಗ್ರಾಮದ ಕಿರಣ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.
ತಾಲ್ಲೂಕಿನ ಕಟ್ಟೆಮಳಲವಾಡಿ, ಕಲ್ಕುಣಿಕೆ, ಹೆಗ್ಗಂದೂರು, ಕಟ್ಟೆಮಳಲವಾಡಿ ಕೊಪ್ಪಲು ಸೇರಿದಂತೆ ಹಲವು ಗ್ರಾಮದ ಜಾನುವಾರುಗಳಿಗೆ ಚರ್ಮ ರೋಗ ಕಾಣಿಸಿಕೊಂಡಿದ್ದು, ಹಸು ಮತ್ತು ಎತ್ತುಗಳ ಮೈ ಮೇಲೆ ಗಂಟುಗಳು ಗೋಚರಿಸುತ್ತಿವೆ. ಈ ಜಾನುವಾರುಗಳು ಮೇವು ಬಿಟ್ಟು ಮಂಕಾಗಿ ದೈಹಿಕವಾಗಿ ಸೊರಗುತ್ತಿವೆ ಎಂದು ತಿಳಿಸಿದ್ದಾರೆ.
ಪಶುವೈದ್ಯ ಇಲಾಖೆಯವರು ಇದಕ್ಕೆ ಔಷಧ ಒದಗಿಸುತ್ತಿಲ್ಲ. ರೈತರು ಔಷಧಿ ಖರೀದಿಸಿ ನೀಡಬೇಕಾಗಿದೆ. ಪ್ರತಿ ಚುಚ್ಚುಮದ್ದಿಗೆ ಕನಿಷ್ಠ ₹250 ತಗಲುತ್ತಿದ್ದು, ಇಲಾಖೆ ಈ ಬಗ್ಗೆ ಗಮನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಶುವೈದ್ಯಾಧಿಕಾರಿ ಲಿಂಗರಾಜು ದೊಡ್ಡಮನಿ, ‘ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಗಂಟು ರೋಗ ವೈರಸ್ನಿಂದ ಹರಡುತ್ತದೆ. ಈ ರೋಗ ನಿಯಂತ್ರಣಕ್ಕೆ ಆ್ಯಂಟಿಬಯೋಟಿಕ್ ಚುಚ್ಚುಮದ್ದು ನೀಡಬೇಕಿದ್ದು, ಇಲಾಖೆಯಲ್ಲಿ ಲಭ್ಯವಿದೆ. ರೈತರು ಔಷಧ ಅಂಗಡಿಯಲ್ಲಿ ಖರೀದಿಸುವ ಅಗತ್ಯವಿಲ್ಲ’ ಎಂದು ತಿಳಿಸಿದರು.
ಈ ರೋಗ ತಾನಾಗೇ ನಿಲ್ಲಲಿದ್ದು, ರೋಗ ಕಾಣಿಸಿಕೊಂಡ ಜಾನುವಾರುಗಳನ್ನು ಪ್ರತ್ಯೇಕಿಸಿ ಕೊಟ್ಟಿಗೆಯಲ್ಲಿ ಕಟ್ಟಬೇಕು. ಇಲ್ಲವಾದಲ್ಲಿ ಇತರೆ ಜಾನುವಾರುಗಳಿಗೂ ಹರಡಲಿದೆ. ಈ ಬಗ್ಗೆ ಡಾ.ಭಾಸ್ಕರ್ ರೈತರಿಗೆ ಈಗಾಗಲೇ ಜಾಗೃತಿ ಮೂಡಿಸುವಲ್ಲಿ ತೊಡಗಿದ್ದಾರೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.