ಹುಣಸೂರು: ತಾಲ್ಲೂಕಿನ ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಕಟ್ಟಡ ಹಾಗೂ ಸಿಬ್ಬಂದಿ ಕೊರತೆ ಇದ್ದು ಹೊರ ರೋಗಿಗಳ ಶುಶ್ರೂಷೆ ಕಷ್ಟವಾಗಿದೆ ಎಂದು ತಾಲ್ಲೂಕಿನ ವಿವಿಧ ಆಸ್ಪತ್ರೆಗಳ ವೈದ್ಯರು ಶಾಸಕ ಮಂಜುನಾಥ್ ಅವರ ಗಮನ ಸೆಳೆದರು.
ನಗರಸಭೆಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮ ಕುರಿತು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ 23 ಕೇಂದ್ರಗಳ ವೈದ್ಯರು ವಿವಿಧ ಸಮಸ್ಯೆಗಳನ್ನು ಹೊರ ಹಾಕಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಕೀರ್ತಿಕುಮಾರ್ ಮಾತನಾಡಿ, ‘ತಾಲ್ಲೂಕಿನ 23 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೇರಿಸಲಾಗಿದ್ದು, ಈ ಪೈಕಿ ಕಟ್ಟೆಮಳಲವಾಡಿ, ಹಿರಿಕ್ಯಾತನಹಳ್ಳಿ, ಹೊಸೂರು ಗೇಟ್, ದೊಡ್ಡಹೆಜ್ಜೂರು, ಕರಿಮುದ್ದನಹಳ್ಳಿ ಕರ್ಣಕುಪ್ಪೆ 6 ಆಸ್ಪತ್ರೆಗಳಿಗೆ ಕಟ್ಟಡ ಇಲ್ಲವಾಗಿದೆ. ಹೀಗಾಗಿ, ಮೇಲ್ದರ್ಜೆಗೇರಿದ್ದರೂ ಇರುವ ಹಳೆ ವ್ಯವಸ್ಥೆಯಲ್ಲೇ ಸೇವೆ ನೀಡಲಾಗುತ್ತಿದೆ’ ಎಂದರು.
ತಾಲ್ಲೂಕಿನ ಕಟ್ಟೆಮಳಲವಾಡಿ ಮತ್ತು ನೇರಳಕುಪ್ಪೆ ಗ್ರಾಮಗಳ ಆಸ್ಪತ್ರೆಗೆ ವೈದ್ಯರ ಕೊರತೆ ಇದ್ದು, ನೇರಳಕುಪ್ಪೆ ಆಸ್ಪತ್ರೆಗೆ ಹನಗೋಡು ಆಸ್ಪತ್ರೆಯಿಂದ ಆಯುಷ್ ವೈದ್ಯರನ್ನು ನಿಯೋಜಿಸಲಾಗಿದೆ. ಕಟ್ಟೆಮಳಲವಾಡಿ ಗ್ರಾಮಕ್ಕೆ ವೈದ್ಯರು ಬರಲು ಸಮ್ಮತಿಸುತ್ತಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕೈಗೊಳ್ಳುವ ಕೆಲವು ಕಾಮಗಾರಿಗಳ ಕುರಿತಂತೆ ಸಂಬಂಧಿಸಿದ ಆಸ್ಪತ್ರೆ ವೈದ್ಯಾಧಿಕಾರಿಗಳ ಗಮನಕ್ಕೆ ತಂದಲ್ಲಿ ಅವಶ್ಯಕವಿರುವ ಕಾಮಗಾರಿಗೆ ಆದ್ಯತೆ ನೀಡಿ ಅನುದಾನ ಬಳಸಲು ಸಹಕಾರಿ ಆಗಲಿದೆ ಎಂದು ಬಿಳಿಕೆರೆ ವೈದ್ಯಾಧಿಕಾರಿ ಡಾ.ಉಮೇಶ್ ಹೇಳಿದರು.
ಶಾಸಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಂಪೌಂಡ್ ನಿರ್ಮಿಸಲು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಗಿರೀಶ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಬಸವರಾಜ್, ತಾ.ಪಂ. ಅಧ್ಯಕ್ಷೆ ಪದ್ಮಮ್ಮ,ವೈದ್ಯಕೀಯ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.