ADVERTISEMENT

ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಿದರೆ ಕಠಿಣ ಕ್ರಮ: ಪೊಲೀಸರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 9:32 IST
Last Updated 16 ಆಗಸ್ಟ್ 2019, 9:32 IST
   

ಮೈಸೂರು: ಬಾಲಕ ಅಥವಾ ಬಾಲಕಿಯರ ಕೈಗೆ ವಾಹನ ಚಾಲನೆ ಮಾಡಲು ನೀಡಿದರೆ ವಾಹನದ ಮಾಲೀಕರನ್ನೂ ಆರೋಪಿಗಳನ್ನಾಗಿ ಪರಿಗಣಿಸಲಾಗುತ್ತದೆ ಎಂದು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಅವಘಡಗಳು ಸಂಭವಿಸಲೇಬೇಕು ಎಂದೇನಿಲ್ಲ. ವಾಹನ ತಪಾಸಣೆ ವೇಳೆ ಬಾಲಕ, ಬಾಲಕಿಯರು ಚಾಲನೆ ಮಾಡುತ್ತಿರುವುದು ಕಂಡು ಬಂದರೆ ಕೂಡಲೇ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈಚೆಗಷ್ಟೇ ಬಾಲಕನೊಬ್ಬ ಮಹೀಂದ್ರ ಸ್ಕಾರ್ಪಿಯೊ ವಾಹನ ಚಾಲನೆ ಮಾಡಿ ಗುದ್ದಿದ್ದರಿಂದ ವಿದ್ಯಾರ್ಥಿನಿ ಅಶ್ವಿನಿ ಮೃತಪಟ್ಟಿದ್ದರು. ಬಾಲಕನನ್ನು ರಿಮ್ಯಾಂಡ್‌ ಹೋಂಗೆ ಹಾಗೂ ವಾಹನ ನೀಡಿದ ಮಂಜುನಾಥ್‌ ಎಂಬಾತನನ್ನು ಬಂಧಿಸುವ ಮೂಲಕ ಖಡಕ್ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದರು.

ADVERTISEMENT

ಇತ್ತ ಅಪಘಾತದಲ್ಲಿ ಪುತ್ರಿಯನ್ನು ಕಳೆದುಕೊಂಡ ಗುಂಡ್ಲುಪೇಟೆ ತಾಲ್ಲೂಕಿನ ಹುಲ್ಲೇಹಳ್ಳಿಯ ಶಿವಯ್ಯ ಅವರಿಗೆ ದಿಕ್ಕೇ ತೋಚದಂತಾಗಿದೆ. ಪತ್ನಿಯನ್ನು ಕಳೆದುಕೊಂಡಿದ್ದ ಇವರು ಮೊದಲ ಪುತ್ರಿಗೆ ಮದುವೆ ಮಾಡಿದ್ದರು. ಎರಡನೇ ಪುತ್ರಿಯಾದ ಅಶ್ವಿನಿಯನ್ನು ಮೈಸೂರಿನಲ್ಲಿ ಹಾಸ್ಟೆಲ್‌ನಲ್ಲಿರಿಸಿ ಓದಿಸುತ್ತಿದ್ದರು. ಪುತ್ರಿಯ ಮೇಲೆ ಅತಿಯಾದ ಮಮಕಾರ ಇಟ್ಟುಕೊಂಡಿದ್ದರು. ಪುತ್ರಿ ಸಾವಿನಿಂದ ಶಿವಯ್ಯ ಅವರು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.