ಮೈಸೂರು: ‘ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಹೋರಾಟ ಮಾಡಿದ ಮೇರು ವ್ಯಕ್ತಿ ಡಾ.ರಾಜ್ಕುಮಾರ್’ ಎಂದು ತಹಶೀಲ್ದಾರ್ ಮಹೇಶ್ ಹೇಳಿದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಟ ರಾಜ್ಕುಮಾರ್ ಜನ್ಮ ದಿನಾಚರಣೆ ಪ್ರಯುಕ್ತ ಗುರುವಾರ ಇಲ್ಲಿನ ಡಾ.ರಾಜ್ ಕುಮಾರ್ ಉದ್ಯಾನದಲ್ಲಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
‘ಗೋಕಾಕ್ ಚಳವಳಿ ಸೇರಿದಂತೆ ಅನೇಕ ಸಂದರ್ಭದಲ್ಲಿ ನಾಡು, ನುಡಿ ವಿಚಾರವಾಗಿ ಹೋರಾಟ ಮಾಡಿದ್ದಾರೆ. ಅಂತಹ ಮಹನೀಯರ ಜಯಂತಿಯಲ್ಲಿ ಭಾಗಿಯಾಗಿರುವುದು ಬಹಳ ಸಂತಸ ಉಂಟುಮಾಡಿದೆ’ ಎಂದು ಹೇಳಿದರು.
‘ರಾಜ್ ಕುಮಾರ್ ಅವರ ಜೀವನ ಸರಳತೆಯಿಂದ ಕೂಡಿದ್ದು, ಅವರು ನಟಿಸಿದ ಪಾತ್ರಗಳ ಮೌಲ್ಯಗಳನ್ನು ಜೀವನದಲ್ಲಿಯೂ ಅಳವಡಿಸಿಕೊಂಡು ಜೀವಿಸುತ್ತಿದ್ದರು. ಆದ್ದರಿಂದಲೇ ಇಂದಿಗೂ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರು ಮಕ್ಕಳು, ಹಿರಿಯರನ್ನು ಭೇದಭಾವವಿಲ್ಲದೆ ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು’ ಎಂದರು.
‘ಅಭಿಮಾನಿಗಳಿಂದ ಹೆಚ್ಚು ಬಿರುದನ್ನು ಪಡೆದಿರುವ ಏಕೈಕ ನಟ ರಾಜ್ ಕುಮಾರ್. ತಮ್ಮ ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ ವರನಟ, ನಟಸಾರ್ವಭೌಮ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಮೊದಲಾದ ಬಿರುದುಗಳನ್ನು ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದ ಹೆಮ್ಮೆಯ ನಟ’ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ವಲಯ ಆಯುಕ್ತೆ ಪ್ರತಿಭಾ, ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಸಹಾಯಕ ವಾರ್ತಾಧಿಕಾರಿ ಕೆ.ಎನ್.ರಮೇಶ್, ಡಾ.ರಾಜ್ ಕುಮಾರ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ರಾಜ್ ಕುಮಾರ್ ಅವರ ಸಂಬಂಧಿ ಎಸ್.ಎ.ಶ್ರೀನಿವಾಸ್, ಮುಖಂಡ ರಘುರಾಂ ಕೆ.ವಾಜಪೇಯಿ ಉಪಸ್ಥಿತರಿದ್ದರು.
ನಾಡು, ನುಡಿ ವಿಚಾರವಾಗಿ ಹೋರಾಟ ಮಾಡಿದ ನಟ: ಸ್ಮರಣೆ ‘ಅಭಿಮಾನಿಗಳಿಂದ ಹೆಚ್ಚು ಬಿರುದನ್ನು ಪಡೆದ ಹೆಮ್ಮೆಯ ವ್ಯಕ್ತಿ’ ಡಾ.ರಾಜ್ಕುಮಾರ್ ಜೀವನ ಸರಳತೆಯೇ ಎಲ್ಲರಿಗೂ ಆದರ್ಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.