ಮೈಸೂರು: ‘ಹೆಣ್ಣು ಮಕ್ಕಳು ವಿದ್ಯಾವಂತರಾಗುವುದು ದೇಶದ ಪ್ರಗತಿಗೆ ಸಹಕಾರಿಯಾಗಲಿದೆ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ತಾಲ್ಲೂಕಿನ ದೊಡ್ಡ ಮಾರಗೌಡನಹಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
‘ಅದ್ದೂರಿತನ, ದುಂದುವೆಚ್ಚ ಬಿಟ್ಟ ಸರಳ ವಿವಾಹವಾಗುವಂತೆ ಸಂಕಲ್ಪ ಮಾಡಬೇಕು’ ಎಂದರು.
‘ಹೆಣ್ಣು ಮಕ್ಕಳಿಂದ ದೇಶ ಪ್ರಗತಿಯಾಗಲಿದೆ. ಕುಟುಂಬವನ್ನು ಹೇಗೆ ಮುನ್ನಡೆಸಬೇಕು, ಎಷ್ಟು ಆದಾಯ ಬರಲಿದೆ, ಎಷ್ಟು ಖರ್ಚು ಮಾಡಬೇಕು ಎಂಬುದನ್ನು ಯೋಚಿಸಿ ಯೋಜಿಸುವ ಜಾಣ್ಮೆ ಮಹಿಳೆಗಿದೆ. ಆದರೆ, ಪುರುಷರು ಬೇಕಾಬಿಟ್ಟಿಯಾಗಿ ಖರ್ಚು ಮಾಡಿ ಸಾಲ ಮಾಡುವಂತಾಗುತ್ತದೆ’ ಎಂದು ಹೇಳಿದರು.
‘ಸರಳ ಬದುಕು ಸಾಗಿಸಬೇಕು. ನಾವು ಹಣ ಇಲ್ಲದಿದ್ದರೂ ದುಂದುವೆಚ್ಚ ಮಾಡಲು ಬಯಸುತ್ತೇವೆ. ಹಣ ಬೇಕೆಂದಾಗ ಸಾಲ ಮಾಡುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಭ್ರಷ್ಟಾಚಾರ ತಡೆಯಬಹುದು’ ಎಂದರು.
‘ಚಾಮುಂಡೇಶ್ವರಿ ದೊಡ್ಡ ಕ್ಷೇತ್ರವಾಗಿದೆ. ಮೈಸೂರಿನ ನಾಲ್ಕು ದಿಕ್ಕುಗಳಿಗೂ ಚಾಚಿಕೊಂಡಿದೆ. ಡಿಸೆಂಬರ್ ವೇಳೆಗೆ ಹಳೆಯ ಉಂಡುವಾಡಿ ಯೋಜನೆ ಮುಗಿಸಿ ಪ್ರತಿಯೊಂದು ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
ಪಿಡಿಒ ರುಕ್ಮಾಂಗದ ಹಾಗೂ ಶಾಲೆಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.