ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಸೋಮವಾರ ಎಲ್ಲರ ಕಣ್ಣು ಆನೆಗಳ ಮೇಲಿತ್ತು. ಆನೆಮನೆಯ ಆವರಣದಲ್ಲಿ ಸೇರಿದ್ದ ವಿದ್ಯಾರ್ಥಿಗಳ ಗುಂಪು ಪ್ರವಾಸಿಗರನ್ನು ಬಹುವಾಗಿ ಸೆಳೆಯಿತು.
ವಿಶ್ವ ಆನೆ ದಿನಾಚರಣೆಯ ಅಂಗವಾಗಿ ಮೃಗಾಲಯದ ವತಿಯಿಂದ ಇಲ್ಲಿ ಆನೆಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ನಡೆಯುತ್ತಿತ್ತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಿ ಆನೆಗಳ ಕುರಿತಾದ ಅಪರೂಪದ ಮಾಹಿತಿಗಳನ್ನು ಪಡೆದುಕೊಂಡರು. ಭಿತ್ತಿಪತ್ರಗಳ ಮೂಲಕ ‘ಆನೆ– ಮಾನವ ಸಂಘರ್ಷ’ದ ಒಳಸುಳಿಗಳನ್ನು ವಿವರಿಸಲಾಯಿತು.
ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಮಾತನಾಡಿ, ಹಲವು ಕಾರಣಗಳಿಂದ ಆನೆಗಳ ಸಾವಿನ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಬಹಳಷ್ಟು ಬಾರಿ ಆನೆ– ಮಾನವ ಸಂಘರ್ಷದಿಂದಾಗಿ ಇವು ಪ್ರಾಣ ಕಳೆದುಕೊಳ್ಳುತ್ತಿವೆ. ಹೀಗಾಗಿ, ಆನೆಗಳ ರಕ್ಷಣೆಗಾಗಿ ಈ ದಿನವನ್ನು ಆನೆಗಳ ದಿನ ಎಂದು ಪರಿಗಣಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಹಾರಾಜ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಮೃಗಾಲಯದ ಯೂತ್ ಕ್ಲಬ್ ಸದಸ್ಯರು, ಪ್ರವಾಸಿಗರು ಆನೆಗಳ ಬಗ್ಗೆ ಮಾಹಿತಿ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.