ಮೈಸೂರು: ಗಜಪಯಣದೊಂದಿಗೆ ದಸರಾ ಮಹೋತ್ಸವದ ಚಟುವಟಿಕೆಗಳು ಗರಿಗೆದರಿದ್ದು, ಜಂಬೂಸವಾರಿಯ ಪ್ರಮುಖ ಆಕರ್ಷಣೆ ಎನಿಸಿರುವ ಗಜಪಡೆ ಸ್ವಾಗತಕ್ಕೆ ಮೈಸೂರು ಅರಮನೆ ಸಜ್ಜಾಗಿದೆ.
ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಆವರಣದೊಳಗೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳು ಪ್ರವೇಶಿಸಲಿವೆ. ಶುಕ್ರವಾರ ಮಧ್ಯಾಹ್ನ 12.18ರಿಂದ 12.40ರೊಳಗೆ ಸಲ್ಲುವ ಧನುರ್ ಲಗ್ನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರುಐದು ಆನೆಗಳಿಗೆ ಪುಷ್ಪಾರ್ಚನೆ ಮಾಡಿ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಿದ್ದಾರೆ. ಅದಕ್ಕಾಗಿ ದ್ವಾರದ ಬಳಿ ಅಲಂಕಾರ ಮಾಡಲಾಗಿದ್ದು, ಹೂವಿನಿಂದ ಮೂರು ಆನೆಗಳ ಪ್ರತಿಕೃತಿ ರಚಿಸಲಾಗಿದೆ.
ಗಜಪಡೆ ವಾಸ್ತವ್ಯಕ್ಕಾಗಿ ಆವರಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಮಾವುತರು, ಕಾವಾಡಿಗರ ವಾಸ್ತವ್ಯಕ್ಕೆ ಶೆಡ್ ನಿರ್ಮಿಸಲಾಗಿದೆ. ಈಗಾಗಲೇ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಿಂದ ಬಂದಿರುವ ಆನೆಗಳು ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ತಂಗಿವೆ.
‘ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಟ್ರಕ್ನಲ್ಲಿ ಅರಮನೆಯ ಮುಖ್ಯದ್ವಾರದ ಬಳಿಗೆ ಆನೆಗಳನ್ನು ಕರೆದೊಯ್ಯಲಾಗು
ವುದು. ಕೋವಿಡ್ ಪರಿಸ್ಥಿತಿ ಕಾರಣ
ಈ ಬಾರಿ ಸಾಕಷ್ಟು ಮುಂಜಾಗ್ರತಾ
ಕ್ರಮ ವಹಿಸಲಾಗಿದೆ. ಕಳೆದ
ವರ್ಷದಂತೆ ಅರಣ್ಯ ಭವನದಿಂದ ಅರಮನೆ ಆವರಣಕ್ಕೆ ಆನೆಗಳನ್ನು ರಸ್ತೆಯಲ್ಲಿ ನಡೆಸಿಕೊಂಡು ಹೋಗುವುದಿಲ್ಲ’ ಎಂದು ಡಿಸಿಎಫ್ (ವನ್ಯಜೀವಿ) ಎಂ.ಜೆ.ಅಲೆಕ್ಸಾಂಡರ್ ತಿಳಿಸಿದರು.
ಅರಮನೆ ಆವರಣದಲ್ಲೇ ನಿತ್ಯ ತಾಲೀಮು ನೀಡಲಾಗುತ್ತದೆ. ಈ ಬಾರಿ ಮೆರವಣಿಗೆಯಲ್ಲಿ ಅಂಬಾರಿ ಹೊರಲಿರುವ ಅಭಿಮನ್ಯು ಆನೆಯನ್ನು ಮಾವುತ ವಸಂತ ಮುನ್ನಡೆಸಲಿದ್ದಾರೆ. ಇದು ಅವರಿಗೆ ಸಿಗುತ್ತಿರುವ ಮೊದಲ ಅವಕಾಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.