ಮೈಸೂರು: ಸಮಾನ ನಾಗರಿಕ ಸಂಹಿತೆ ಮುಸ್ಲಿಂ ವಿರೋಧಿ ಅಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಎಚ್.ವಿ.ರಾಜೀವ್ ಸ್ನೇಹ ಬಳಗ, ಇನ್ನೋವೇಟಿವ್, ಸೌಮ್ಯ ಪ್ರಕಾಶನ, ತುಳುಶಿವಳ್ಳಿ ಮಾಧ್ವ ಬ್ರಾಹ್ಮಣ ಸೌಹಾರ್ದ ಸಂಘದ ವತಿಯಿಂದ ಇಲ್ಲಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿ.ಎಸ್.ಭಟ್ಟ ಅವರ ‘ಮೋದಿ ಎಂಬ ವಿಸ್ಮಯ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಎಲ್ಲ ಧರ್ಮದ, ಜಾತಿಯ, ವರ್ಗದ ಜನರು ಒಂದಾಗಿ ಬದುಕುವುದಕ್ಕೆ ರೂಪಿಸಲಾಗುತ್ತಿರುವ ಸಂಹಿತೆ ಇದಾಗಿದೆ. ತ್ರಿವಳಿ ತಲಾಖ್ ರದ್ದುಗೊಳಿಸಿದ್ದನ್ನೂ ಮುಸ್ಲಿಂ ವಿರೋಧಿ ಕ್ರಮ ಎಂದು ಬಿಂಬಿಸಲಾಯಿತು. ಸಮಾನ ನಾಗರಿಕ ಸಂಹಿತೆ ಕುರಿತು ಇದೇ ಬಗೆಯ ಅಪಪ್ರಚಾರ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆರ್ಎಸ್ಎಸ್ ಎಂಬ ಗುರುವಿನ ಕೆಳಗೆ ರೂಪುಗೊಂಡ ವಿಸ್ಮಯವೇ ನರೇಂದ್ರ ಮೋದಿ. ‘ವೀಸಾ’ವನ್ನು ನಿರಾಕರಿಸಿದ ಅಮೆರಿಕ ನಂತರ ರತ್ನಗಂಬಳಿಯನ್ನು ಇವರಿಗೆ ಹಾಸಿದ್ದನ್ನು ನೋಡಿದರೆ ನಿಜಕ್ಕೂ ವಿಸ್ಮಯ ಎನಿಸುತ್ತದೆ ಎಂದರು.
ಭಾರತ ಸಂಕಟದಲ್ಲಿ ಸಿಲುಕಿದಾಗಲೆಲ್ಲ ಇಂತಹ ವಿಸ್ಮಯಗಳು ಜರುಗುತ್ತಿರುತ್ತವೆ. ನಂದರನ್ನು ಸೋಲಿಸಲು ಬುಡಕಟ್ಟು ಸಮುದಾಯದ ಚಂದ್ರಗುಪ್ತ ಮೌರ್ಯರನ್ನು ಚಾಣಕ್ಯ ರೂಪಿಸಿದಂದಿನಿಂದ ಹಿಡಿದು ಇಲ್ಲಿಯವರೆಗೂ ಇಂತಹ ವಿಸ್ಮಯಗಳು ನಡೆಯುತ್ತಿವೆ ಎಂದು ಹೇಳಿದರು.
‘ಗೋದ್ರಾ ಘಟನೆಯ ನಂತರ ಇಲ್ಲಿಯವರೆಗೂ ಮೋದಿ ಅವರ ಮೇಲೆ ಆತ್ಮಸ್ಥೈರ್ಯವನ್ನೇ ಉಡುಗಿಸುವಂತಹ ಪರೋಕ್ಷ ದಾಳಿಗಳು ನಡೆದಿವೆ. ಇದನ್ನೆಲ್ಲ ತಾಳಿಕೊಂಡಿರುವ ಅವರು ನಿಜಕ್ಕೂ ನಮ್ಮ ಕಾಲದ ಉಕ್ಕಿನ ಮನುಷ್ಯ’ ಎಂದು ಶ್ಲಾಘಿಸಿದರು.
ಭಾರತವನ್ನು ಪಾಕಿಸ್ತಾನಕ್ಕೋ, ಬಾಂಗ್ಲಾದೇಶಕ್ಕೋ ಗಿರವಿ ಇಡುವಂತಹ ನಾಯಕತ್ವ ಬೇಕೋ ಅಥವಾ ಪಾಕಿಸ್ತಾನ, ಬಾಂಗ್ಲಾವನ್ನೂ ಭಾರತವನ್ನಾಗಿಸುವ ನಾಯಕತ್ವ ಬೇಕೋ ಎಂದು ಅವರು ಪ್ರಶ್ನಿಸಿದರು.
ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಂತಕ ಡಾ.ವಿ.ರಂಗನಾಥ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಚಂದ್ರಶೇಖರ್, ತುಳುಶಿವಳ್ಳಿ ಮಾಧ್ವಬ್ರಾಹ್ಮಣ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಜಗದೀಶ್ಹೆಬ್ಬಾರ್ ಕಾರಿಜ, ಲೇಖಕ ಜಿ.ಎಸ್.ಭಟ್ಟ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.