ಮೈಸೂರು: 55 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಚಿಕ್ಕ ಮಕ್ಕಳಿರುವವರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹಾಗೂ ಸೀಲ್ಡೌನ್ ಆದ ಪ್ರದೇಶದಲ್ಲಿರುವ ಶಿಕ್ಷಕರಿಗೆ ಕಡ್ಡಾಯವಾಗಿ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯಿಂದ ವಿನಾಯಿತಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರತಿ ಮೌಲ್ಯಮಾಪನ ಕೇಂದ್ರದಲ್ಲೂ ಅಗತ್ಯವಿರುವ ಎಲ್ಲ ರೀತಿಯ ಆರೋಗ್ಯ ಸುರಕ್ಷತಾ ಸೌಲಭ್ಯ ಕಲ್ಪಿಸುವ ಜೊತೆ, ಪ್ರಕ್ರಿಯೆ ಪೂರ್ಣಗೊಂಡ ದಿನವೇ ಎಲ್ಲ ಭತ್ಯೆಗಳನ್ನು ಕಡ್ಡಾಯವಾಗಿ ಪಾವತಿಸಬೇಕು ಎಂದು ಕೋರಿದ್ದಾರೆ.
ರಾಜ್ಯದ ಸರ್ಕಾರಿ ಆದರ್ಶ ಹಾಗೂ ಕೆಲವು ಖಾಸಗಿ ಶಾಲೆಗಳಲ್ಲಿ ಆಂಗ್ಲಭಾಷೆ ಪ್ರಥಮ ಭಾಷೆಯಾಗಿ, ಕನ್ನಡವನ್ನು ದ್ವಿತೀಯ ಭಾಷೆಯಲ್ಲಿ ಕಲಿಸಲಾಗುತ್ತಿದೆ. ಈ ಎರಡೂ ವಿಷಯ ಪತ್ರಿಕೆಗಳ ಮೌಲ್ಯಮಾಪನ ಬೆಂಗಳೂರು, ಮಂಗಳೂರಿನಲ್ಲಿ ಮಾತ್ರ ನಡೆಯಲಿದೆ ಎಂಬುದು ತಿಳಿದು ಬಂದಿದೆ.
ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ಕಡಿಮೆ ಸಂಖ್ಯೆಯ ಮೌಲ್ಯಮಾಪಕರಿದ್ದು, ಹೆಚ್ಚಿನವರು ಮಹಿಳಾ ಶಿಕ್ಷಕರೇ ಆಗಿದ್ದಾರೆ. ಕೋವಿಡ್ನ ಈ ವಿಷಮ ಪರಿಸ್ಥಿತಿಯಲ್ಲಿ 10 ದಿನ ಬೆಂಗಳೂರು, ಮಂಗಳೂರಿನ ಕೇಂದ್ರಗಳಲ್ಲಿ ನಡೆಯಲಿರುವ ಮೌಲ್ಯಮಾಪನಕ್ಕೆ ಹಾಜರಾಗಲು ಸಾಧ್ಯವಿಲ್ಲದವರಿಗೆ ಕಡ್ಡಾಯವಾಗಿ ವಿನಾಯಿತಿ ನೀಡಬೇಕು ಎಂದು ಮರಿತಿಬ್ಬೇಗೌಡ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.