ADVERTISEMENT

‘ಸರ್ಕಾರಿ ಕಾಲೇಜಿನಲ್ಲೂ ಅತ್ಯಾಧುನಿಕ ಸೌಲಭ್ಯ’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 16:04 IST
Last Updated 1 ಆಗಸ್ಟ್ 2022, 16:04 IST
ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನವೀಕರಿಸಿದ ಕಾರಂಜಿ, ಧ್ವನಿವರ್ಧಕ ಕೊಠಡಿ ಮತ್ತು ದ್ವಿಚಕ್ರವಾಹನಗಳ ನಿಲ್ದಾಣವನ್ನು ಶಾಸಕ ಎಲ್.ನಾಗೇಂದ್ರ ಸೋಮವಾರ ಉದ್ಘಾಟಿಸಿದರು
ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನವೀಕರಿಸಿದ ಕಾರಂಜಿ, ಧ್ವನಿವರ್ಧಕ ಕೊಠಡಿ ಮತ್ತು ದ್ವಿಚಕ್ರವಾಹನಗಳ ನಿಲ್ದಾಣವನ್ನು ಶಾಸಕ ಎಲ್.ನಾಗೇಂದ್ರ ಸೋಮವಾರ ಉದ್ಘಾಟಿಸಿದರು   

ಮೈಸೂರು: ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನವೀಕರಿಸಿದ ಕಾರಂಜಿ, ಧ್ವನಿವರ್ಧಕ ಕೊಠಡಿ ಮತ್ತು ದ್ವಿಚಕ್ರ ವಾಹನಗಳ ನಿಲ್ದಾಣವನ್ನು ಶಾಸಕ ಎಲ್.ನಾಗೇಂದ್ರ ಸೋಮವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಸರ್ಕಾರಿ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಬಡ ಮತ್ತು ಮಧ್ಯಮ ವರ್ಗದಿಂದ ಬಂದವರೇ ಆಗಿರುತ್ತಾರೆ. ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಖಾಸಗಿ ಕಾಲೇಜಿನಲ್ಲಿರುವಂತೆ ಸಕಲ ಸೌಲಭ್ಯಗಳನ್ನು ನೀಡಬೇಕಾದ ಜವಾಬ್ದಾರಿ ಇದೆ. ಹೀಗಾಗಿ, ಸರ್ಕಾರದಿಂದ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಮೈಸೂರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಆದ್ದರಿಂದ ಇಲ್ಲಿನ ಕಾಲೇಜುಗಳಿಗೆ ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗು ಜಿಲ್ಲೆಗಳಿಂದಲೂ ಮಕ್ಕಳು ವ್ಯಾಸಂಗಕ್ಕೆ ಬರುತ್ತಾರೆ. ಇಲ್ಲಿ ವಿದ್ಯಾಭ್ಯಾಸ ಮುಗಿಸಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿರುವವರ ಸಂಖ್ಯೆ ಅಪಾರವಾಗಿದೆ. ಇದೆಲ್ಲದಕ್ಕೂ ಭದ್ರವಾದ ಬುನಾದಿ ಹಾಕಿದ ಮೈಸೂರು ಮಹಾರಾಜರನ್ನು ನೆನಪಿಸಿಕೊಳ್ಳಬೇಕು. ಪ್ರತ್ಯೇಕವಾಗಿ ಕಾಲೇಜುಗಳನ್ನು ತೆರೆದು ಅವರು ಮಹಿಳಾ ಶಿಕ್ಷಣಕ್ಕೂ ಆದ್ಯತೆ ನೀಡಿದ್ದರು’ ಎಂದು ಸ್ಮರಿಸಿದರು.

ADVERTISEMENT

ನಗರಪಾಲಿಕೆ ಸದಸ್ಯರಾದ ಶಿವಕುಮಾರ್, ಪ್ರಮೀಳಾ ಭರತ್, ಕಾಮಿಡಿ ಗ್ಯಾಂಗ್ ವಿಜೇತ ಕೇಶವಮೂರ್ತಿ ಶೀಳನೆರೆ, ಪ್ರಾಂಶುಪಾಲ ಡಾ.ಡಿ.ರವಿ, ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕ ಡಾ.ಪರಶುರಾಮಮೂರ್ತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.