ಮೈಸೂರು: ಸೆ.30ರಿಂದ ನಡೆಯುವ ರೈತ ದಸರೆಯಲ್ಲಿ 'ಚಾರ್ಲಿ 777' ಸಿನಿಮಾ ಖ್ಯಾತಿಯ ಶ್ವಾನ ಪ್ರಮುಖ ಆಕರ್ಷಣೆಯಾಗಲಿದೆ.
ಮೈಸೂರು ವಿಶ್ವವಿದ್ಯಾಲಯದ ಸ್ಫೋಟ್ಸ್ ಪೆವಿಲಿಯನ್ ಹಾಕಿ ಮೈದಾನದಲ್ಲಿ ಸೆ.2ರಂದು ಬೆಳಿಗ್ಗೆ 10.30ಕ್ಕೆ ‘ಸಾಕು ಪ್ರಾಣಿಗಳ ಪ್ರದರ್ಶನ’ಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಲಿದ್ದಾರೆ. 'ಚಾರ್ಲಿ 777' ಜೊತೆ ತರಬೇತುದಾರ ಪ್ರಮೋದ್ ತಾರಾ ಮೆರಗು ನೀಡಲಿದ್ದಾರೆ.
'ಇದೇ ಮೊದಲ ಬಾರಿ ರೈತ ದಸರಾದಲ್ಲಿ ಸಾಕುಪ್ರಾಣಿಗಳು ಆಗಮಿಸಲಿವೆ' ಎಂದು ಎಂದು ರೈತ ದಸರಾ ಉಪಸಮಿತಿಯ ಕಾರ್ಯದರ್ಶಿ ಷಡಕ್ಷರಿ ಸೋಮವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು.
'ಸಂಜೆ 5.30ಕ್ಕೆ ವಿಜೇತ ಪ್ರಾಣಿಗಳ ಮಾಲೀಕರಿಗೆ ಬಹುಮಾನವನ್ನು ಪಶುಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ವಿತರಿಸಲಿದ್ದಾರೆ’ ಎಂದರು.
ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ: 'ಜೆ.ಕೆ. ಮೈದಾನದಲ್ಲಿ ಅ.1ರಂದು ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ. ಸೆ.29ಕ್ಕೆ ರಾಜ್ಯದ ವಿವಿಧೆಡೆಯಿಂದ ಗೋವಿನ ಪಾಲಕರು ಹಸುಗಳೊಂದಿಗೆ ಆಗಮಿಸಲಿದ್ದಾರೆ. ಸೆ.30 ರಂದು ಹಸುಗಳಿಗೆ ವಿಶ್ರಾಂತಿ ಇದ್ದು, 1ರಂದು ಸ್ಪರ್ಧೆ ನಡೆಯಲಿದೆ' ಎಂದು ಷಡಕ್ಷರಿ ಮಾಹಿತಿ ನೀಡಿದರು.
ಗೆದ್ದ ನಾಲ್ವರಿಗೆ ಕ್ರಮವಾಗಿ ₹50 ಸಾವಿರ, ₹40 ಸಾವಿರ, ₹30 ಸಾವಿರ ಹಾಗೂ ₹20 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ರೈತ ದಸರೆಯ ಉಪವಿಶೇಷಾಧಿಕಾರಿ ಡಾ.ಎಂ.ಕೃಷ್ಣರಾಜು, ಕಾರ್ಯಾಧ್ಯಕ್ಷ ಡಾ.ಬಿ.ಎಸ್.ಚಂದ್ರಶೇಖರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.