ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್ಎಸ್ ಅರ್ಬನ್ ಹಾತ್ನಲ್ಲಿ ಆಯೋಜಿಸಿರುವ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ‘ಸಂಸ್ಕೃತಿ 2020’ಕ್ಕೆ ಶುಕ್ರವಾರ ಚಾಲನೆ ಲಭಿಸಿತು.
ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ಸಹಯೋಗದಲ್ಲಿ ಡಿ.6ರ ವರೆಗೆ ಏರ್ಪ ಡಿಸಿರುವ ಮೇಳವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಉದ್ಘಾಟಿಸಿದರು.
ಕೆಲವು ತಿಂಗಳ ಬಿಡುವಿನ ಬಳಿಕ ಅರ್ಬನ್ ಹಾತ್ನಲ್ಲಿ ಮೇಳವನ್ನು ಆಯೋಜಿಸಿದ್ದು , 40 ಮಳಿಗೆಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ರಿಯಾಯಿತಿಯೊಂದಿಗೆ ಕೈಮಗ್ಗದ ಉತ್ಪನ್ನಗಳು ಲಭ್ಯವಾಗಲಿವೆ. ಮೇಳದ ಅವಧಿಯಲ್ಲಿ ಸರ್ಕಾರದ ಕೋವಿಡ್ -19 ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮವಹಿಸಲಾಗಿದೆ.
ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಸಹಕಾರಿ ಸಂಘಗಳಲ್ಲಿ ಕೈಮಗ್ಗ ನೇಕಾರರು ತಯಾರಿಸಿದ ರೇಷ್ಮೆ, ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಮೇಳದಲ್ಲಿ ಏರ್ಪಡಿಸಲಾಗಿದೆ .
ರೇಷ್ಮೆ ಸೀರೆ, ಇಳಕಲ್ ಸೀರೆ, ಕಸೂತಿ ಸೀರೆ, ತಮಿಳುನಾಡಿನ ಕಾಂಜೀವರಂ ಸೀರೆ, ಬಿಹಾರದ ತಷ ಸೀರೆ, ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ ಸೀರೆ, ಒಡಿಶಾ ರಾಜ್ಯದ ಸಂಬಲ್ಪುರಿ ಸೀರೆ, ಕಾಶ್ಮೀರದ ಪಶ್ಮಿನಾ ಶಾಲ್, ಆಂಧ್ರಪ್ರದೇಶದ ಗೊದ್ವಾಲ್ ರೇಷ್ಮೆ ಸೀರೆ, ಗುಜರಾತಿನ ಪಟೇಲ ರೇಷ್ಮೆಸೀರೆಗಳು ಅಲ್ಲದೆ ಎಲ್ಲಾ ರಾಜ್ಯಗಳ ರೇಷ್ಮೆ ಹಾಗೂ ಕಾಟನ್ ಸೀರೆಗಳು, ಡ್ರೆಸ್ ಮೆಟೀರಿಯಲ್ಗಳು, ಕಸೂತಿ ವಸ್ತ್ರಗಳು, ಮೇಲು ಹಾಸು, ಹೊದಿಕೆಗಳು, ನೆಲಹಾಸು, ಇತರ ಕೈಮಗ್ಗ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿವೆ.
ಜಿ.ಪಂ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ.ಬೆಟಸೂರಮಠ, ಜೆಎಸ್ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ನಿರ್ದೇಶಕ ಎಂ.ಬಿ.ದ್ಯಾಬೇರಿ, ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ, ಡಾ.ಸಿ ರಂಗನಾಥಯ್ಯ, ಎಸ್.ಮುದ್ದಯ್ಯ, ಕೆ.ಆರ್.ಸಂತಾನಂ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.