ಮೈಸೂರು: ಎಲ್ಲ ಹಾಲು ಒಕ್ಕೂಟಗಳಲ್ಲಿ ಖಾಲಿ ಇರುವ 1,400 ಹುದ್ದೆಗಳನ್ನು ಸದ್ಯದಲ್ಲೇ ಭರ್ತಿ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಬೆಂಗಳೂರು ಹಾಲು ಒಕ್ಕೂಟಕ್ಕೆ 292 ಹುದ್ದೆಗಳ ಭರ್ತಿಗೆ ಹಾಗೂ ಮಂಡ್ಯ, ಮಂಗಳೂರು, ವಿಜಯಪುರದ ಹಾಲು ಒಕ್ಕೂಟಗಳ ಹುದ್ದೆಗಳ ಭರ್ತಿಗೆ ಒಪ್ಪಿಗೆ ನೀಡಲಾಗಿದೆ. ಮುಂದಿನ ವರ್ಷದ ಜೂನ್ ಒಳಗೆ 40 ಸಾವಿರ ಸಹಕಾರ ಸಂಘಗಳಲ್ಲಿ ಖಾಲಿ ಇರುವ 5 ಸಾವಿರ ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗಾರರಿಗೆ ಹೇಳಿದರು.
ರೋಷನ್ಬೇಗ್ ‘ಬಾಂಬೆ ಟೀಂ’ನಲ್ಲಿರಲಿಲ್ಲ
ರೋಷನ್ಬೇಗ್ ಬಿಜೆಪಿ ನಂಬಿ ಬಂದಿಲ್ಲ. ಅವರು ನಮ್ಮ ‘ಬಾಂಬೆ ಟೀಂ’ನಲ್ಲೂ ಇರಲಿಲ್ಲ. ಒಂದು ವೇಳೆ ಅವರು ಬಿಜೆಪಿ ನಂಬಿದ್ದರೆ ಶಿವಾಜಿನಗರದಲ್ಲೇ ಟಿಕೆಟ್ ಸಿಗುತ್ತಿತ್ತು. ‘ಐಎಂಎ’ ಹಗರಣದಲ್ಲಿ ಅವರ ಪಾತ್ರ ಇಲ್ಲ ಎಂದು ಸಾಬೀತಾದ ಬಳಿಕ ಬಿಡುಗಡೆಯಾಗಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ನುಡಿದಂತೆ ನಡೆಯುವವರು. ‘ಬಾಂಬೆ ಟೀಂ’ನಲ್ಲಿ ಇದ್ದವರನ್ನು ಸಚಿವರನ್ನಾಗಿ ಮಾಡಲು ಹೈಕಮಾಂಡ್ ಅನುಮತಿ ಕೇಳಿದ್ದಾರೆ. ಈಗ ಹೈಕಮಾಂಡ್ಗೆ ಬಿಡುವಿಲ್ಲ. ಅವರ ಒಪ್ಪಿಗೆ ದೊರೆತ ನಂತರ ಇನ್ನುಳಿದವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿದರು.
‘ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಯಡಿಯೂರಪ್ಪ ನಡುವೆ ನಡೆದ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಬಿಜೆಪಿಯಲ್ಲಿರುವ ಎಲ್ಲರಿಗೂ ಯಡಿಯೂರಪ್ಪ ಅವರೇ ನಾಯಕರು. ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ಎಲ್ಲೋ ಒಂದಿಬ್ಬರು ನಾವು ನಾಯಕರು ಎಂದು ಶೋ ನೀಡಲು ಹೊರಟಿದ್ದಾರೆ’ ಎಂದು ತಿಳಿಸಿದರು.
ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 6 ವಿಭಾಗಗಳ ಪಕ್ಷದ ಉಸ್ತುವಾರಿಯನ್ನು ಒಬ್ಬೊಬ್ಬರಿಗೆ ವಹಿಸಲಾಗಿದೆ. ಮೈಸೂರು ಭಾಗಕ್ಕೆ ಆರ್.ಅಶೋಕ್ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.