ADVERTISEMENT

ಕೋವಿಡ್‌ ನಿಯಮ ಉಲ್ಲಂಘನೆ: ಉಗಿದವರಿಗೂ ದಂಡ ವಿಧಿಸಲು ಆರಂಭ

ತೀವ್ರ ನಿಗಾ ವಹಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 3 ಮೇ 2021, 3:45 IST
Last Updated 3 ಮೇ 2021, 3:45 IST

ಮೈಸೂರು: ರಸ್ತೆಯಲ್ಲಿ ಎಲ್ಲೆಂದರಲ್ಲಿ ಉಗುಳುತ್ತಾ ಬರುವವರ ಮೇಲೆಯೂ ದಂಡ ವಿಧಿಸಲು ಪೊಲೀಸರು ಆರಂಭಿಸಿದ್ದಾರೆ. ‌

ಮಹದೇಶ್ವರ ಬಡಾವಣೆಯ ಹೈಟೆನ್ಷನ್ ರಸ್ತೆಯ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಮಾಸ್ಕ್ ಧರಿಸದೇ ಉಗುಳುತ್ತ ಬರುತ್ತಿದ್ದ ಸುಭಾಷ್ ಎಂಬಾತನ ವಿರುದ್ಧ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ‌

ಕೋವಿಡ್‌ನಿಂದ ಮೃತಪಟ್ಟ ದೇಹದ ಅಂತಿಮ ದರ್ಶನಕ್ಕೆ ನರಸಿಂಹರಾಜ ಠಾಣಾ ವ್ಯಾಪ್ತಿಯಲ್ಲಿ ಸೇರಿದ್ದ 30 ಮಂದಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ.

ADVERTISEMENT

ಹೆಬ್ಬಾಳದ ಹಂಪಿ ವೃತ್ತದ ಬಸ್‌ನಿಲ್ದಾಣದ ಬಳಿ ಮಾಸ್ಕ್ ಧರಿಸದೇ ಪರಸ್ಪರ ಅಂತರ ಕಾಯ್ದುಕೊಳ್ಳದೇ ಕುಳಿತಿದ್ದ ಪ್ರವೀಣ್ ಹಾಗೂ ಷಣ್ಮುಗಂ ಎಂಬುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಇದಲ್ಲದೇ ಕೋವಿಡ್ ಮಾರ್ಗಸೂಚಿಯಂತೆ ನಿಗದಿತ ವೇಳೆಗೆ ಬಾಗಿಲು ಮುಚ್ಚದ ನಜರ್‌ಬಾದ್, ದೇವರಾಜ, ವಿಜಯನಗರ, ನರಸಿಂಹರಾಜ ಠಾಣಾ ವ್ಯಾಪ್ತಿಗಳಲ್ಲಿ ಹಲವು ಅಂಗಡಿಗಳ ಮೇಲೆ ಪ್ರಕರಣ ದಾಖಲಾಗಿದೆ.

ರಸ್ತೆಯಲ್ಲಿ ಉಗುಳುವುದು ಕೋವಿಡ್ ಪ್ರಸರಣವನ್ನು ಹೆಚ್ಚಿಸುತ್ತದೆ. ಮಾಸ್ಕ್ ಹಾಕದೇ ಪರಸ್ಪರ ಅಂತರ ಕಾಯ್ದುಕೊಳ್ಳದೇ ಸಾರ್ವಜನಿಕವಾಗಿ ಕುಳಿತುಕೊಳ್ಳುವುದೂ ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಜತೆಗೆ, ಕೋವಿಡ್‌ನಿಂದ ಮೃತಪಟ್ಟವರ ಅಂತಿಮ ದರ್ಶನಕ್ಕೆ ಜನ ಸೇರುವುದೂ ಸಹ ಉಲ್ಲಂಘನೆಯ ಭಾಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋವಿಡ್ ನಿಯಮ ಉಲ್ಲಂಘನೆಯನ್ನು ಪತ್ತೆ ಹಚ್ಚುವುದಕ್ಕಾಗಿಯೇ ನಿಯೋಜಿಸಲಾಗಿರುವ 3 ವಾಹನಗಳಲ್ಲಿ ಪೊಲೀಸರು ನಿತ್ಯ ಗಸ್ತು ತಿರುಗುತ್ತಿದ್ದು, ನಿಯಮ ಉಲ್ಲಂಘನೆಯ ವಿಡಿಯೊ ಮಾಡಿಕೊಳ್ಳುತ್ತಾರೆ. ನಂತರ, ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಹಾಗಾಗಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.