ಕೆ.ಆರ್.ನಗರ: ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಷ್ಟ್ರಮಟ್ಟದಲ್ಲಿ ನಡೆಸಿದ ಸ್ವಚ್ಛತಾ ಸಮೀಕ್ಷೆಯಲ್ಲಿ ಇಲ್ಲಿನ ಪುರಸಭೆ ‘ಸ್ವಚ್ಛ ಸರ್ವೇಕ್ಷಣ್- 2020’ ಪ್ರಶಸ್ತಿಯಲ್ಲಿಗುರುವಾರ ಮೊದಲ ಸ್ಥಾನ ಪಡೆಯಿತು.
ದಕ್ಷಿಣ ಭಾರತದ 6 ರಾಜ್ಯಗಳನ್ನೊಳಗೊಂಡ, 25ರಿಂದ 50ಸಾವಿರ ಜನಸಂಖ್ಯೆ ಹೊಂದಿರುವ ಪುರಸಭೆಗೆ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿ ಇದಾಗಿದ್ದು, ಕಳೆದ ಬಾರಿ ಈ ಪುರಸಭೆ ದ್ವಿತೀಯ ಸ್ಥಾನ ಪಡೆದಿತ್ತು. ಈ ಬಾರಿ ಮೊದಲ ಸ್ಥಾನಕ್ಕೇರಿ, ಸತತ ಎರಡು ಬಾರಿ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆಗೆ ಈ ಪುರಸಭೆ ಪಾತ್ರವಾಗಿದೆ.
ಪುರಸಭೆ ಮುಖ್ಯಾಧಿಕಾರಿ ಕೆ.ಶಿವಣ್ಣ ಮಾತನಾಡಿ, ‘ಮನೆ ಮನೆಯಿಂದ ಹಸಿ ಕಸ -ಒಣ ಕಸ ಬೇರ್ಪಡಿಸಿ ವಿಶೇಷವಾಗಿ ವಿನ್ಯಾಸ ಗೊಳಿಸಲಾಗಿರುವ ಪ್ರತ್ಯೇಕ ವಾಹನಗಳಲ್ಲಿ ಸಾಗಾಟ ಮಾಡಲಾಗುತ್ತದೆ. ಹಸಿ ಕಸವನ್ನು ಸಾವಯವ ಕಾಂಪೋಸ್ಟ್ ಆಗಿ ಸಂಸ್ಕರಿಸಲಾಗುತ್ತಿದೆ, ಬೇರ್ಪಡಿಸಲಾದ ಒಣ ತ್ಯಾಜ್ಯವನ್ನು ಅಧಿಕೃತ ಪುನರ್ ಬಳಕೆದಾರರಿಗೆ ಮಾರಾಟ ಮಾಡಲಾಗುತ್ತಿದೆ, ಇದಕ್ಕಾಗಿ ತಾಲ್ಲೂಕಿನ ಮೂಡಲಕೊಪ್ಪಲು ಗ್ರಾಮದ ಬಳಿ 4 ಎಕರೆ ಜಮೀನು ಖರೀದಿಸಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಹೇಳಿದರು.
ಪರಿಸರ ಎಂಜಿನಿಯರ್ ಕೆ.ಪಿ.ರವಿಕುಮಾರ್ ಮಾತನಾಡಿ, 'ಪ್ರಶಸ್ತಿಯಿಂದ ಶಾಸಕ ಸಾ.ರಾ.ಮಹೇಶ್ ಸೇರಿದಂತೆ ಮುಖ್ಯಾಧಿಕಾರಿ ಕೆ.ಶಿವಣ್ಣ, ಪೌರ ಕಾರ್ಮಿಕರು ಮತ್ತು ಸಿಬ್ಬಂದಿ ಶ್ರಮಕ್ಕೆ ಗೌರವ ಸಿಕ್ಕಂತಾಗಿದೆ. ಸಾರ್ವಜನಿಕರು ಪುರಸಭೆಯ ನಿಯಮಾನುಸಾರ ಸ್ವಚ್ಛತೆ ಕಾಪಾಡಬೇಕು, ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಯಲು ಪ್ರತಿಯೊಬ್ಬರು ಸಹಕರಿಸಬೇಕು‘ ಎಂದು ಮನವಿ ಮಾಡಿದರು.
ದೆಹಲಿಯಿಂದ ಗುರುವಾರ ನಡೆದ ಆನ್ಲೈನ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೈಸೂರಿನ ಅರಮನೆ ಆವರಣದಲ್ಲಿ ವೀಕ್ಷಿಸಲಾಯಿತು. ಕೇಂದ್ರ ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ, ಕಾರ್ಯದರ್ಶಿ ಅಮಿತ್ ಮಿಶ್ರಾ ಅವರು ಪ್ರಶಸ್ತಿ ಘೋಷಣೆ ಮಾಡಿದರು.
‘ಮೈಸೂರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಲೋಕನಾಥ್. ಶ್ರೀಕಂಠಸ್ವಾಮಿ, ಚಂದ್ರಶೇಖರ್, ಪಾರ್ವತಿದೇವಿ ಅವರೊಂದಿಗೆ ಪುರಸಭೆ ಮುಖ್ಯಾಧಿಕಾರಿ ಕೆ ಶಿವಣ್ಣ, ಪರಿಸರ ಎಂಜಿನಿಯರ್ ಕೆ.ಪಿ.ರವಿಕುಮಾರ್, ಆರೋಗ್ಯ ನಿರೀಕ್ಷಕರಾದ ರಮೇಶ್, ಲೋಕೇಶ್ ಮತ್ತು ಲೀಲಾ ಭಾಗವಹಿಸಿದ್ದೇವು’ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಶಿವಣ್ಣ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.