ADVERTISEMENT

ಮೈಸೂರು: ಮೀನು ಕೃಷಿಗೆ ವರವಾದ ವರ್ಷಧಾರೆ

ಪ್ರಸಕ್ತ ಸಾಲಿನಲ್ಲಿ 1.80 ಕೋಟಿ ಮೀನು ಮರಿಗಳ ಬಿತ್ತನೆ ಗುರಿ

ಎಂ.ಮಹೇಶ್
Published 27 ಜೂನ್ 2025, 5:56 IST
Last Updated 27 ಜೂನ್ 2025, 5:56 IST
ತಿ. ನರಸೀಪುರ ತಾಲ್ಲೂಕು ಚಾಮನಹಳ್ಳಿ ಕೆರೆಯಲ್ಲಿ ಮೀನು ಸಾಕಣೆ ನೋಟ
ತಿ. ನರಸೀಪುರ ತಾಲ್ಲೂಕು ಚಾಮನಹಳ್ಳಿ ಕೆರೆಯಲ್ಲಿ ಮೀನು ಸಾಕಣೆ ನೋಟ   

ಮೈಸೂರು: ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕೆರೆ–ಕಟ್ಟೆ ಮೊದಲಾದವು ಜಲರಾಶಿಯಿಂದ ಕಂಗೊಳಿಸುತ್ತಿರುವುದು ಮೀನು ಬಿತ್ತನೆಗೆ ವರದಾನವಾಗಿ ಪರಿಣಮಿಸಿದೆ. ಈ ಬಾರಿ ಹೆಚ್ಚಿನ ಮೀನು ಕೃಷಿಗೆ ಮೀನುಗಾರಿಕೆ ಇಲಾಖೆ ಗುರಿ ಹಾಕಿಕೊಂಡಿದೆ.

ಜಿಲ್ಲೆಯಲ್ಲಿ ಇಲಾಖೆಯ ವ್ಯಾಪ್ತಿಯಲ್ಲಿ 99 ಕೆರೆಗಳಿವೆ. ಇವುಗಳಲ್ಲಿ ಹೋದ ಆರ್ಥಿಕ ವರ್ಷದಲ್ಲಿ ನಡೆದ ಮತ್ಸ್ಯ ಕೃಷಿಯಲ್ಲಿ 1.65 ಕೋಟಿ ಮೀನು ಮರಿಗಳನ್ನು ಮರಿ ಬಿತ್ತನೆ ಮಾಡಲಾಗಿತ್ತು. ಈ ಬಾರಿಯೂ ಉತ್ತಮ ಮಳೆ ಆಗುತ್ತಿರುವುದರಿಂದಾಗಿ 1.80 ಕೋಟಿ ಮೀನು ಬಿತ್ತನೆಗೆ ಗುರಿ ಹಾಕಿಕೊಳ್ಳಲಾಗಿದೆ. ಹಿಂದಿನ ವರ್ಷ 22,230 ಮೆಟ್ರಿಕ್‌ ಟನ್‌ ಉತ್ಪಾದನೆಯಾಗಿತ್ತು. ಈ ಸಲ 25ಸಾವಿರ ಮೆಟ್ರಿಕ್ ಟನ್‌ ಇಳುವರಿ ತೆಗೆಯುವ ಗುರಿಯನ್ನು ಹೊಂದಲಾಗಿದೆ.

ಜಿಲ್ಲೆಯಲ್ಲಿ 11,314 ಮೀನುಗಾರ ಕುಟುಂಬಗಳಿದ್ದು, 45,256 ಮಂದಿ ಸದಸ್ಯರಿದ್ದಾರೆ. ಈ ಪೈಕಿ 25,988 ಮಂದಿ ಮೀನುಗಾರಿಕೆಯನ್ನೇ ಮುಖ್ಯ ಆಧಾರವಾಗಿಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. 19,268 ಮಂದಿ ಅರೆಕಾಲಿಕವಾಗಿ ಈ ಕೃಷಿಯಲ್ಲಿ ತೊಡಗಿದ್ದಾರೆ. ಹುಣಸೂರು, ಎಚ್‌.ಡಿ. ಕೋಟೆ, ಪಿರಿಯಾ‍ಪಟ್ಟಣ, ಕೆ.ಆರ್. ನಗರ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರರು ಕಂಡುಬರುತ್ತಾರೆ. 45 ಮೀನುಗಾರರ ಸಹಕಾರ ಸಂಘಗಳಿದ್ದು, ಮೀನು ಹಾಗೂ ಮೀನು ಖಾದ್ಯಗಳನ್ನು ಮಾರಾಟ ಮಾಡುವುದಕ್ಕೆ ಜಿಲ್ಲೆಯ ವಿವಿಧೆಡೆ 100 ಕಿಯೋಸ್ಕ್‌ಗಳನ್ನು ಮೀನುಗಾರಿಕೆ ಮಹಾಮಂಡಳದಿಂದ ಸ್ಥಾಪಿಸಲಾಗಿದೆ.

ADVERTISEMENT

ವೈಜ್ಞಾನಿಕ ತರಬೇತಿ:

‘ಮೀನುಗಾರಿಕೆ ಬಗ್ಗೆ ವೈಜ್ಞಾನಿಕ ಹಾಗೂ ಪ್ರಾಯೋಗಿಕವಾಗಿ ತರಬೇತಿ ನೀಡಲೆಂದೇ ಇಲಾಖೆಯಿಂದ ಎಚ್‌.ಡಿ. ಕೋಟೆ ತಾಲ್ಲೂಕು ಕಬಿನಿಯಲ್ಲಿ ತರಬೇತಿ ಕೇಂದ್ರ ನಡೆಸಲಾಗುತ್ತಿದೆ. ಅಲ್ಲಿ ಒಂದು ವಾರ, 3 ದಿನಗಳ ತರಬೇತಿ ನೀಡಲಾಗುತ್ತಿದೆ. ಮೀನು ಮರಿ ಉತ್ಪಾದನಾ ಕೇಂದ್ರವೂ ಅಲ್ಲಿದ್ದು, ಸಾಕಣೆ ಬಗ್ಗೆ ಮಾರ್ಗದರ್ಶನ ಕೊಡಲಾಗುತ್ತಿದೆ. ಪ್ರಮಾಣಪತ್ರ ವಿತರಣೆ ಮಾಡಲಾಗುತ್ತಿದೆ. ಮೀನುಸಾಕಣೆ ಕೃಷಿ ಬಗ್ಗೆ ಪ್ರೋತ್ಸಾಹವನ್ನೂ ನೀಡಲಾಗುತ್ತಿದೆ’ ಎಂದು ಇಲಾಖೆಯ ಉಪನಿರ್ದೇಶಕ ಜಿ.ಎಚ್‌. ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆ–ಕಟ್ಟೆಗಳಲ್ಲಿ ಮಾತ್ರವಲ್ಲದೇ, ಸ್ವಂತ ಜಮೀನಿನಲ್ಲಿ ಹಾಗೂ ಕೃಷಿ ಹೊಂಡಗಳಲ್ಲಿ ಮೀನು ಸಾಕಣೆ ಮಾಡುವವರಿಗೆ (ಕನಿಷ್ಠ 6 ತಿಂಗಳಿಗಿಂತ ಹೆಚ್ಚು ನೀರು ನಿಲ್ಲುವಂತಿರಬೇಕು) ಸ್ಥಳೀಯವಾಗಿ ‘ಜಿಲೇಬಿ’ ಎಂದು ಕರೆಯಲಾಗುವ (ಜಿಐಎಫ್‌ಟಿ– ಜೆನೆಟಿಕಲ್‌ ಇಂಪ್ರೂವ್ಡ್‌ ಫಾರ್ಮ್ಡ್‌ ಥಿಲಪಿಯಾ) 250 ಮೀನು ಮರಿಗಳನ್ನು ರೈತರಿಗೆ ಉಚಿತವಾಗಿ ಕೊಡಲಾಗುವುದು. ಎಷ್ಟೇ ಮಂದಿ ಅರ್ಜಿ ಸಲ್ಲಿಸಿದರೂ ದೊರೆಯಲಿದೆ. ಜಮೀನಿನ ಆರ್‌ಟಿಸಿ, ಆಧಾರ್ ಕಾರ್ಡ್‌ ಜೊತೆ ಕೊಟ್ಟರೆ ನಾವೇ ಹೋಗಿ ತಾಲ್ಲೂಕುಮಟ್ಟಕ್ಕೆ ಅಥವಾ ಗ್ರಾಮ ಪಂಚಾಯಿತಿ ಮಟ್ಟಕ್ಕೆ ತಲುಪಿಸುತ್ತೇವೆ. ಇದರಿಂದ ಎಲ್ಲ ಕಡೆಯೂ ಮೀನು ಸಾಕಣೆಯನ್ನು ವಿಸ್ತರಿಸಿದಂತಾಗುತ್ತದೆ ಹಾಗೂ ಜಲಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳುವ ಕಾರ್ಯವೂ ಆಗಲಿದೆ. ಮೀನು ಉತ್ಪಾದನೆಯ ಪ್ರಮಾಣವೂ ಹೆಚ್ಚಾಗುತ್ತದೆ ಎಂಬ ಉದ್ದೇಶ ಹೊಂದಲಾಗಿದೆ’ ಎನ್ನುತ್ತಾರೆ ಅವರು. 

ಸಹಾಯಧನ:

‘ಮೀನು ಮರಿ ಖರೀದಿಗೆ ಸಹಾಯಧನ ಕೊಡಲಾಗುತ್ತಿದೆ. ಹೆಕ್ಟೇರ್‌ಗೆ 2ಸಾವಿರ ಮೀನು ಮರಿಗಳನ್ನು ಬಿತ್ತನೆ ಮಾಡಿದರೆ ಶೇ 50ರಷ್ಟು ಸಹಾಯಧನ ಸಿಗುತ್ತದೆ. ಕೆರೆ ಹರಾಜು, ಗುತ್ತಿಗೆ ಪಡೆದವರು ಕೆರೆಯ ಅಂಚಿನಲ್ಲೇ ಕೊಳ ನಿರ್ಮಿಸಿಕೊಂಡು ಅಲ್ಲಿ ಮರಿಗಳನ್ನು ಪಾಲನೆ ಮಾಡಿದರೆ, ಒಂದು ಎಕರೆ ಪ್ರದೇಶಕ್ಕೆ 1 ಲಕ್ಷ ಸಹಾಯಧನ ದೊರೆಯುತ್ತದೆ. ಹರಿಗೋಲು ಮೊದಲಾದ ಮೀನು ಹಿಡುವಳಿಗೆ ಬೇಕಾಗುವ ಸಲಕರಣೆ ಖರೀದಿಗೆ ₹ 10ಸಾವಿರ ಸಹಾಯಧನ ನೀಡಲಾಗುವುದು. ಮಾರಾಟ ಅಗತ್ಯವಾದ ಕ್ರೇಟ್‌, ತಕ್ಕಡಿ ಮೊದಲಾದ ಸಲಕರಣೆಗಳನ್ನು ಖರೀದಿಸಲು ಶೇ 40ರಷ್ಟು ಸಹಾಯಧನ ದೊರೆಯಲಿದೆ’ ಎಂದು ಮಾಹಿತಿ ನೀಡಿದರು.

ಮನೆ ನಿರ್ಮಾಣಕ್ಕೆ ಸಹಾಯಧನ

‘ಆಯಾ ಮೀನುಗಾರರ ಸಹಕಾರ ಸಂಘದಲ್ಲಿ ಸದಸ್ಯರಾಗಿದ್ದು ಮೀನು ಕೃಷಿ ವೃತ್ತಿ ಮಾಡುತ್ತಿರುವ ವಸತಿರಹಿತರಿಗೆ ‘ಮತ್ಸ್ಯಾಶ್ರಯ’ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯಧನ ಬೆಂಬಲ ಸಿಗಲಿದೆ. ಸಾಮಾನ್ಯ ವರ್ಗದವರಿಗೆ ₹ 1.20 ಲಕ್ಷ ಹಾಗೂ ಪರಿಶಿಷ್ಟ ಜಾತಿ ವರ್ಗದವರಿಗೆ ₹ 1.70 ಲಕ್ಷ ಹಣಕಾಸಿ ನನೆರವು ಕೊಡಲಾಗುವುದು’ ಎಂದು ಮಂಜುನಾಥ್‌ ತಿಳಿಸಿದರು. ಕೆರೆಗಳನ್ನು ಗುತ್ತಿಗೆ ಕೊಡುವಾಗ ಸಂಘಗಳಿಗೆ ಆದ್ಯತೆ ನೀಡಲಾಗುತ್ತದೆ. ಈ ವರ್ಷ 30 ಕೆರೆಗಳು ವಿಲೇವಾರಿಗೆ ಬಂದಿದ್ದವು. ಅವುಗಳಲ್ಲಿ 9 ಕೆರೆಗಳನ್ನು ಗುತ್ತಿಗೆ ಪಡೆಯಲು ಅರ್ಜಿ ಬಂದಿದ್ದವು. ಉಳಿದವನ್ನು ಇ– ಟೆಂಡರ್ ಮೂಲಕ ವಿಲೇವಾರಿ ಮಾಡಲಾಗಿದೆ. ಇ–ಟೆಂಡರ್‌ ಪ್ರಕ್ರಿಯೆಯಲ್ಲಿ 2022ರಿಂದ ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ಮೀಸಲಾತಿಯನ್ನೂ ಕಲ್ಪಿಸಲಾಗುತ್ತಿದೆ’ ಎಂದು ಮಂಜುನಾಥ್ ವಿವರಿಸಿದರು.

ಜಿಲ್ಲೆಯಲ್ಲಿ ಮೀನು ಬಿತ್ತನೆ ಮತ್ತು ಉತ್ಪಾದನೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಮೀನುಗಳಿಗೆ ಉತ್ತಮ ಬೇಡಿಕೆ ಇರುವುದು ಇದಕ್ಕೆ ಕಾರಣ
ಜಿ.ಎಚ್. ಮಂಜುನಾಥ್ ಉಪನಿರ್ದೇಶಕ, ಮೀನುಗಾರಿಕೆ ಇಲಾಖೆ
ಮೀನುಗಾರರ ಸಹಕಾರ ಸಂಘದಿಂದಲೇ ಮೀನು ಮಾರಿದರೆ ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೇ ಹೆಚ್ಚಿನ ಲಾಭ ಗಳಿಸಬಹುದೆಂಬ ಜಾಗೃತಿ ಮೂಡಿಸಲಾಗುತ್ತಿದೆ
ಎಸ್.ಯುಕೇಶ್‌ಕುಮಾರ್ ಸಿಇಒ, ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.