ADVERTISEMENT

ತಿ.ನರಸೀಪುರ: ರಸ್ತೆಗೆ ಸುಗಂಧರಾಜ ಹೂವು ಸುರಿದು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಮೇ 2025, 14:44 IST
Last Updated 20 ಮೇ 2025, 14:44 IST
ಸುಗಂಧರಾಜ ಹೂವು ಖರೀದಿಸದೇ ಅನಗತ್ಯ ಷರತ್ತು ಹಾಕಿ ರೈತರಿಗೆ ತೊಂದರೆ ನೀಡುತ್ತಿರುವ ತಿ.ನರಸೀಪುರ ತಾಲ್ಲೂಕಿನ ನೆಸ್ಸೋ ಕಾರ್ಖಾನೆ ವಿರುದ್ಧ ಬೆಳೆಗಾರರು ರಸ್ತೆಯಲ್ಲಿ ಹೂವು ಸುರಿದು ಪ್ರತಿಭಟನೆ ನಡೆಸಿದರು
ಸುಗಂಧರಾಜ ಹೂವು ಖರೀದಿಸದೇ ಅನಗತ್ಯ ಷರತ್ತು ಹಾಕಿ ರೈತರಿಗೆ ತೊಂದರೆ ನೀಡುತ್ತಿರುವ ತಿ.ನರಸೀಪುರ ತಾಲ್ಲೂಕಿನ ನೆಸ್ಸೋ ಕಾರ್ಖಾನೆ ವಿರುದ್ಧ ಬೆಳೆಗಾರರು ರಸ್ತೆಯಲ್ಲಿ ಹೂವು ಸುರಿದು ಪ್ರತಿಭಟನೆ ನಡೆಸಿದರು   

ತಿ.ನರಸೀಪುರ: ತಾಲ್ಲೂಕಿನ ತುಂಬಲ ಗ್ರಾಮ ಸಮೀಪದ ನ್ಯಾಚುರಲ್ ಎಸೆನ್ಸಿಯಲ್ ಆಯಿಲ್ (ನೆಸ್ಸೋ) ಖಾಸಗಿ ಕಾರ್ಖಾನೆ ತಾಲ್ಲೂಕಿನ ರೈತರಿಂದ ಸುಗಂಧರಾಜ ಹೂವು ಖರೀದಿಸಿದೆ ಅನಗತ್ಯ ಷರತ್ತುಗಳನ್ನು ಹಾಕಿ ಬೆಳೆಗಾರರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ಬೆಳೆಗಾರರು ರಸ್ತೆಯಲ್ಲಿ ಹೂವು ಸುರಿದು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಿರುಮಕೂಡಲಿನ ಪಿಟೀಲು ಚೌಡಯ್ಯ ವೃತ್ತದಲ್ಲಿ ಸೇರಿದ ಸುಗಂಧರಾಜ ಹೂವು ಬೆಳೆಗಾರರು, ಸ್ಥಳೀಯ ರೈತರಿಂದ ಹೂವು ಖರೀದಿಸದೇ ಕಾರ್ಖಾನೆ ಆಡಳಿತ ಮಂಡಳಿ ತಮಿಳುನಾಡಿನಿಂದ ಹೂವನ್ನು ತರಿಸಿ ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರಲ್ಲದೇ ಮೂಟೆಗಟ್ಟಲೆ ಹೂವನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಕೆಬ್ಬೇಹುಂಡಿ ಶಿವಕುಮಾರ್, ‘ನೆರೆರಾಜ್ಯದಿಂದ ಹೂವನ್ನು ಖರೀದಿಸಿ ಜಿಲ್ಲೆ ಹಾಗೂ ತಾಲ್ಲೂಕು ಹೂವು ಬೆಳೆಗಾರರಿಗೆ ನೆಸ್ಸೋ ಕಂಪನಿ ಅನ್ಯಾಯ ಮಾಡಿದೆ. ಕಾರ್ಖಾನೆಯ ಈ ನಡೆಯಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿರುವ ಕಂಪನಿಯಲ್ಲಿ ರೈತರಿಗೆ ನ್ಯಾಯ ಸಿಗುತ್ತಿಲ್ಲ’ ಎಂದು ಆರೋಪಿಸಿದರು‌

ADVERTISEMENT

‘ಷರತ್ತು ಹಾಕುವುದನ್ನು ನಿಲ್ಲಿಸಿ ತಾಲ್ಲೂಕಿನ ರೈತರಿಂದಲೇ ಹೂವನ್ನು ಖರೀದಿ ಮಾಡಬೇಕು ಇಲ್ಲದಿದ್ದಲ್ಲಿ ಹೂವು ಬೆಳೆಗಾರರ ಸಂಘವು ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಿದೆ’ ಎಂದು ಎಚ್ಚರಿಸಿದರು.

ಸುಗಂಧರಾಜ ಹೂವು ಬೆಳೆಗಾರ ಶಿವರಾಮು ಮಾತನಾಡಿದರು. ಪ್ರತಿಭಟನೆಯಲ್ಲಿ ಸುಗಂಧರಾಜ ಹೂವು ಬೆಳೆಗಾರರ ಸಂಘದ ಅಧ್ಯಕ್ಷ ಬಸಪ್ಪ, ರೇವಣ್ಣ, ಮುರುಡೇಶ್, ಈಶಣ್ಣ, ಲಿಂಗರಾಜು, ಕುಮಾರ್, ಸಿದ್ದಣ್ಣ, ಪುಟ್ಟಸ್ವಾಮಿ, ಮಹದೇವಸ್ವಾಮಿ, ಮಹದೇವಣ್ಣ, ಚಿಕ್ಕ ನಂಜಣ್ಣ ಹಾಜರಿದ್ದರು.

ರೈತರ ಶೋಷಣೆ:

ನ್ಯಾಯ ಕೊಡಿಸಲು ಒತ್ತಾಯ ‘ಸುಗಂಧರಾಜ ಹೂವು ಬೆಳೆಗಾರರು ಕಳೆದ ಒಂದು ವರ್ಷದಿಂದ ಹೋರಾಡುತ್ತಿದ್ದೇವೆ. ಕಳೆದ ಬಾರಿ ಪ್ರತಿಭಟನೆ ನಡೆದ ವೇಳೆ ಪೊಲೀಸರು ಮಧ್ಯಸ್ಥಿಕೆಯಿಂದ ಕಾರ್ಖಾನೆ ನೀಡಿದ್ದ ಭರವಸೆಗೆ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಫ್ಯಾಕ್ಟರಿಯವರು ಇಲ್ಲಸಲ್ಲದ ಷರತ್ತು ಹಾಕುತ್ತಿರುವುದು ಸಣ್ಣ ರೈತರು ಸಂಕಷ್ಟ ಪಡುವಂತಾಗಿದೆ. ಹೂವಿಗೆ ₹ 50ರ ಮೇಲೆ ಬೆಲೆ ಸಿಕ್ಕರೆ ಸ್ಥಳೀಯ ಮಾರ್ಕೆಟ್‌ನಲ್ಲಿ ಲಾಭಕ್ಕೆ ಮಾರಾಟ ಮಾಡಿಕೊಳ್ಳಿ 50 ಕ್ಕಿಂತ ಕಡಿಮೆ ಬೆಲೆಯಾದರೆ ₹ 47ಕ್ಕೆ ನಮಗೆ ಕೊಡಿ ಎನ್ನುತ್ತಿದ್ದ ಫ್ಯಾಕ್ಟರಿಯವರು ಈಗ ಮಾರುಕಟ್ಟೆಯಲ್ಲಿ ₹ 100 ಬೆಲೆ ಬಂದರೂ ನೀವು ಮಾರ್ಕೆಟ್‌ನಲ್ಲಿ ಮಾರಾಟ ಮಾಡುವಂತಿಲ್ಲ. ₹ 47ಕ್ಕೆ ನಮಗೆ ಕೊಡಬೇಕು ಇದನ್ನು ಅಗ್ರಿಮೆಂಟ್ ಮಾಡಿಕೊಡಿ ಇಲ್ಲದಿದ್ದಲ್ಲಿ ನಾನ್ ಅಗ್ರಿಮೆಂಟ್‌ಗೆ ₹ 20 ಕೊಡಿ ಎನ್ನುವ ಮೂಲಕ ರೈತರಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ಕೆಬ್ಬೇಹುಂಡಿ ಶಿವಕುಮಾರ್ ಆಪಾದಿಸಿದರು. ‘ಕಂಪನಿಯ ಆಡಳಿತ ಮಂಡಳಿ ಮಾಲೀಕರು ನಮಗೆ ನೇರ ಸಂಪರ್ಕಕ್ಕೆ ಸಿಗುತ್ತಿಲ್ಲ. ಕಾರ್ಖಾನೆಯ ಆಡಳಿತ ವ್ಯವಸ್ಥೆ ರೈತರನ್ನು ಬಹಳ ಕೇವಲವಾಗಿ ಕಾಣುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ನ್ಯಾಯ ದೊರಕಿಸಲು ರೈತರ ಬೆಳೆಗೆ ಉತ್ತಮ ಬೆಲೆ ಸಿಗುವಂತೆ ಮಾಡಲು ಅಗತ್ಯ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.