ADVERTISEMENT

ಮೈಸೂರು: ಭ್ರೂಣಲಿಂಗ ಪತ್ತೆ; ಆರೋಪಿಗಳಿಗೆ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 4:31 IST
Last Updated 25 ಅಕ್ಟೋಬರ್ 2025, 4:31 IST
   

ಪ್ರಜಾವಾಣಿ ವಾರ್ತೆ

ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಹುಣಗನಹಳ್ಳಿ ಹುಂಡಿ ಗ್ರಾಮದ ಫಾರಂ ಹೌಸ್‌ನಲ್ಲಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಶ್ಯಾಮಲಾ, ಹರೀಶ್‌ ನಾಯಕ, ಶಿವಕುಮಾರ್ ಹಾಗೂ ಪುಟ್ಟರಾಜು ಅವರನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಬನ್ನೂರು ರಸ್ತೆಯ ಸುತ್ತಮುತ್ತಲ ಗ್ರಾಮಗಳಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿರುವ ಮಾಹಿತಿ ಮೇರೆಗೆ ಎರಡು ತಿಂಗಳಿಂದ ಕಣ್ಗಾವಲು ಇಟ್ಟಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದರು.‌

ADVERTISEMENT

‍‘ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಪತ್ತೆಗೆ ಬಲೆ ಬೀಸಿದ್ದೇವೆ. ಆರೋಪಿಗಳಿಗೆ ಆತನೇ ಸೂಚನೆಗಳನ್ನು ನೀಡುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಇನ್ನಿತರೆ ಆರೋಪಿಗಳಾದ ಗೋವಿಂದರಾಜು, ಕಾರ್ತಿಕ್‌ ಅವರ ಬಂಧನಕ್ಕೂ ಕ್ರಮವಹಿಸಿದ್ದೇವೆ’ ಎಂದು ಎಎಸ್‌ಪಿ ಮಲ್ಲಿಕ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘2019 ರಿಂದ ಕಾರ್ಯನಿರ್ವಹಿಸುತ್ತಿರುವ ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ಎಸ್.ಕೆ ಆಸ್ಪತ್ರೆಯಲ್ಲಿ 15 ಹಾಸಿಗೆಗಳಿವೆ. ಬಿಎಸ್ಸಿ ನರ್ಸಿಂಗ್ ಸರ್ಟಿಫಿಕೇಟ್ ಪಡೆದಿರುವ ಶ್ಯಾಮಲಾ ಆಸ್ಪತ್ರೆಯ ಆಡಳಿತವನ್ನು ನಿರ್ವಹಿಸುತ್ತಿದ್ದರು. ಈವರೆಗೂ 200 ಹೆಚ್ಚು ಭ್ರೂಣಲಿಂಗ ಪರೀಕ್ಷೆ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಯಾರಿಗೂ ಅನುಮಾನ ಬಾರದಂತೆ ಭ್ರೂಣಲಿಂಗ ಪರೀಕ್ಷೆ ನಡೆಸುತ್ತಿದ್ದ ನರ್ಸ್ ಶ್ಯಾಮಲಾ, ನೇರವಾಗಿ ಎಸ್.ಕೆ. ಆಸ್ಪತ್ರೆಗೆ ಬಂದರೆ ಒಪ್ಪುತ್ತಿರಲಿಲ್ಲ. ಮಧ್ಯವರ್ತಿಗಳ ಹಾಗೂ ನಂಬಿಕಸ್ಥರ ಮೂಲಕ ಬಂದರೆ ಮಾತ್ರ ಮಾತುಕತೆ ನಡೆಸುತ್ತಿದ್ದರು. ಅದಕ್ಕಾಗಿಯೇ ಹಲವು ಮಧ್ಯವರ್ತಿಗಳಿಗೆ ಹಣ ಕೊಡುತ್ತಿದ್ದರು’ ಎನ್ನಲಾಗಿದೆ.

‘ಹಾರೋಹಳ್ಳಿ- ಹುನಗನಗಳ್ಳಿಯ ಮಧ್ಯೆ ಫಾರಂ ಹೌಸ್ ಜಾಗ ಖರೀದಿಸಿ, ಐಷಾರಾಮಿ ಮನೆ ಕಟ್ಟಿಸಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣ ಲಿಂಗ ಪರೀಕ್ಷೆ ಮತ್ತು ಹೆಣ್ಣು ಭ್ರೂಣಗಳ ಹತ್ಯೆ ಚಟುವಟಿಕೆಯನ್ನು ಫಾರಂ ಹೌಸ್‌ಗೆ ಸ್ಥಳಾಂತರಿಸಿಕೊಂಡಿದ್ದರು’ ಎಂದು ಮಾಹಿತಿ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.