ADVERTISEMENT

‘ವೃತ್ತಿ ರಂಗಭೂಮಿ ಕಲಾವಿದರಿಗೆ ನೆರವಾಗಿ’

ಕೆ.ಎಸ್.ಆರ್.ಪಿ. ಕಮಾಂಡೆಂಟ್ ಬಸವರಾಜ ಜಿಳ್ಳೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಮೇ 2021, 5:52 IST
Last Updated 25 ಮೇ 2021, 5:52 IST
ಕಲಬುರ್ಗಿಯಲ್ಲಿ ಸೋಮವಾರ ವೃತ್ತಿ ರಂಗಭೂಮಿ ಕಲಾವಿದರಿಗೆ ಶ್ರೀ ಸತ್ಯಸಾಯಿ ನಾಟ್ಯ ಸಂಘ ಹಾಗೂ ವಿವಿಧ ಕಂಪನಿಗಳ ಮಾಲೀಕರು ದಿನಸಿ ಕಿಟ್‌ಗಳನ್ನು ವಿತರಿಸಿದರು
ಕಲಬುರ್ಗಿಯಲ್ಲಿ ಸೋಮವಾರ ವೃತ್ತಿ ರಂಗಭೂಮಿ ಕಲಾವಿದರಿಗೆ ಶ್ರೀ ಸತ್ಯಸಾಯಿ ನಾಟ್ಯ ಸಂಘ ಹಾಗೂ ವಿವಿಧ ಕಂಪನಿಗಳ ಮಾಲೀಕರು ದಿನಸಿ ಕಿಟ್‌ಗಳನ್ನು ವಿತರಿಸಿದರು   

ಕಲಬುರ್ಗಿ: ‌‘ಜಿಲ್ಲೆಯ ವೃತ್ತಿ ರಂಗಭೂಮಿ ಕಲಾವಿದರು ಲಾಕ್‌ಡೌನ್‌ ಕಾರಣ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಸರ್ಕಾರ ಕೂಡಲೇ ಅವರ ನೆರವಿಗೆ ಬರಬೇಕು. ಅದಕ್ಕಿಂತ ಹೆಚ್ಚಾಗಿ ಕಲಾಸಕ್ತರು ಈ ಜವಾಬ್ದಾರಿ ಮೆರೆಯಬೇಕು’ ಎಂದು ಕೆ.ಎಸ್.ಆರ್.ಪಿ. ಕಮಾಂಡೆಂಟ್ ಬಸವರಾಜ ಜಿಳ್ಳೆ ಮನವಿ ಮಾಡಿದರು.

ಶ್ರೀ ಸತ್ಯಸಾಯಿ ನಾಟ್ಯ ಸಂಘ ಹಾಗೂ ವಿವಿಧ ಕಂಪನಿಗಳ ಮಾಲೀಕರು, ಬಡ ಕಲಾವಿದರಿಗೆ ನೀಡಲಾದ ದಿನಸಿ ಧಾನ್ಯಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.

‘ಪ್ರೇಕ್ಷಕರನ್ನು ತಮ್ಮ ಅದ್ಭುತವಾದ ಕಲೆಯಿಂದ ಸಂತುಷ್ಟಪಡಿಸುತ್ತಿದ್ದ ವೃತ್ತಿ ರಂಗಭೂಮಿ ಕಲಾವಿದರು ಕೊರೊ
ನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಅವರನ್ನು ನೋಡಿಕೊಳ್ಳುವ ಜವಾಬ್ದಾರು ಪ್ರೇಕ್ಷಕರ ಮೇಲಿದೆ. ತಮ್ಮೆಲ್ಲ ಕಷ್ಟಗಳನ್ನು ನುಂಗಿಕೊಂಡು ಬದುಕುವ ಈ ಕಾಲಾವಿದರು ಎಂದಿಗೂ ಯಾರ ಬಳಿಯೂ ಕಷ್ಟ ಹೇಳಿಕೊಳ್ಳುವವರಲ್ಲ. ಅವರ ಪರಿಸ್ಥಿತಿಯನ್ನು ನಾವೇ ಅರ್ಥ ಮಾಡಿಕೊಳ್ಳಬೇಕಾಗಿದೆ’ ಎಂದರು

ADVERTISEMENT

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವಿಶ್ವಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ‘ಕಲೆಯೇ ವೃತ್ತಿ ರಂಗಭೂಮಿ ಕಲಾವಿದರ ಉಸಿರು. ರಂಗಭೂಮಿಯನ್ನು ಉಳಿಸುವ ಮತ್ತು ಬೆಳೆಸುವ ಕಾಯಕ ನಂಬಿ ಜನರಿಗೆ ಮನೋರಂಜನೆ ಮತ್ತು ಸಾಮಾಜಿಕ ಅರಿವು ಮೂಡಿಸುತ್ತಿದ್ದ ಕಲಾವಿದರ ಬದುಕು ಇಂದು ಕೊರೊನಾದಿಂದಾಗಿ ಕತ್ತಲೆ ಕೂಪದತ್ತ ಸಾಗಿದೆ. ಈಗ ನಮ್ಮ ನೆರವು ಅಗತ್ಯವಾಗಿದೆ’ ಎಂದರು.‌

ಮುಖಂಡರಾದ ಶರಣರಾಜ್ ಛಪ್ಪರಬಂದಿ, ವಿಕ್ರಮ್ ಬೆಜಗಮ್ (ಬಿ.ನಾಗೇಶ), ಡಾ.ನಾಗವೇಣಿ ಪಾಟೀಲ, ಪ್ರಭುಲಿಂಗ ಮೂಲಗೆ, ಸಂಶೋಧಕ ಮುಡುಬಿ ಗುಂಡೇರಾವ, ವಕೀಲ ಹಣಮಂತರಾಯ ಅಟ್ಟೂರ, ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ ಶಹಾಪುರಕರ್, ಹಿರಿಯ ನಾಟಕಕಾರ ಬಸವರಾಜ ಕಟ್ಟಿಮನಿ ಕೊಡೇಕಲ್, ಸಾಯಿನಾಥ ಕಟ್ಟಿಮನಿ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.