ADVERTISEMENT

ದರೋಡೆ ನಡೆದ ನಾಲ್ಕೇ ದಿನಕ್ಕೆ ಆರೋಪಿಗಳ ಸೆರೆ

ವಿಜಯನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, ₹ 6.81 ಲಕ್ಷ ವಶ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 7:35 IST
Last Updated 31 ಅಕ್ಟೋಬರ್ 2018, 7:35 IST
ದರೋಡೆ ಪ್ರಕರಣದ ಬಂಧಿತ ಆರೋಪಿಗಳು
ದರೋಡೆ ಪ್ರಕರಣದ ಬಂಧಿತ ಆರೋಪಿಗಳು   

ಮೈಸೂರು: ಇಲ್ಲಿನ ವಿಜಯನಗರದಲ್ಲಿ ವಿದೇಶಿ ಕರೆನ್ಸಿ ವಿನಿಮಯ ಅಂಗಡಿ ಮಾಲೀಕ ಅರುಣ್‌ಕುಮಾರ್ ಅವರನ್ನು ಅ. 22ರಂದು ಅಡ್ಡಗಟ್ಟಿ ಅವರಿಂದ ಸ್ಕೂಟರ್ ಹಾಗೂ ನಗದು ಮತ್ತು ವಿದೇಶಿ ಕರೆನ್ಸಿಯನ್ನು ದರೋಡೆ ಮಾಡಿದ್ದ ನಾಲ್ವರು ದರೋಡೆಕೋರರನ್ನು ವಿಜಯನಗರ ಠಾಣೆಯ ಪೊಲೀಸರು ನಾಲ್ಕೇ ದಿನಕ್ಕೆ ಬಂಧಿಸಿದ್ದಾರೆ.

ಕೆ.ಆರ್.ನಗರ ತಾಲ್ಲೂಕಿನ ಮಿರ್ಲೆ ಗ್ರಾಮದ ಶ್ರೀಧರ (28), ಮೈಸೂರು ತಾಲ್ಲೂಕಿನ ಕೂರ್ಗಳ್ಳಿಯ ನಟೇಶ್ (24), ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪ್ರಸಾದ್ (24) ಹಾಗೂ ಬೆಂಗಳೂರಿನ ಉತ್ತರದ ಅಮೃತಹಳ್ಳಿಯ ಭರತ್‌ಕುಮಾರ್ (20) ಬಂಧಿತರು.

ಆರೋಪಿಗಳಲ್ಲಿ ಶ್ರೀಧರ್ ಮತ್ತು ನಟೇಶ್ ಎಂಬುವವರು ಅರುಣ್‌ಕುಮಾರ್ ಅವರಿಂದ ದರೋಡೆ ಮಾಡಿದ್ದ ಸ್ಕೂಟರ್‌ನಲ್ಲಿ ಅ. 26ರಂದು ಕೂರ್ಗಳ್ಳಿ ಬಸ್‌ನಿಲ್ದಾಣದ ಬಳಿ ಹೋಗುತ್ತಿದ್ದಾಗ ಬೆನ್ನಟ್ಟಿದ ಪೊಲೀಸರು ಹಿಡಿದಿದ್ದಾರೆ. ನಂತರ, ಇವರನ್ನು ವಿಚಾರಣೆ ಮಾಡಿದಾಗ ಇನ್ನಿಬ್ಬರು ಆರೋಪಿಗಳ ಸುಳಿವು ನೀಡಿದರು. ನಂತರ, ಇವರನ್ನೂ ಬಂಧಿಸಿದ ಪೊಲೀಸರು ದರೋಡೆ ಪ್ರಕರಣವೊಂದನ್ನು ಬಯಲಿಗೆಳೆದಿದ್ದಾರೆ.

ADVERTISEMENT

ಏನಿದು ಪ್ರಕರಣ?: ವಿಜಯನಗರ 1ನೇ ಹಂತದ ನಿವಾಸಿ ಅರುಣ್‌ಕುಮಾರ್ ಅವರು ಶಿವರಾಂಪೇಟೆಯಲ್ಲಿ ವಿದೇಶಿ ವಿನಿಮಯ ಕಚೇರಿ ನಡೆಸುತ್ತಿದ್ದರು. ಆರೋಪಿ ಶ್ರೀಧರ್ ಅಶೋಕ ರಸ್ತೆಯಲ್ಲಿರುವ ಕರೆನ್ಸಿ ವಿನಿಮಯ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕರೆನ್ಸಿ ಬದಲಾವಣೆ ಸಂಬಂಧ ಈತ ಅರುಣ್‌ಕುಮಾರ್ ಅವರ ಕಚೇರಿಗೆ ಹೋಗುತ್ತಿದ್ದ. ಈ ವೇಳೆ ಇವರ ಕಚೇರಿಯ ವ್ಯವಹಾರದ ಸ್ವರೂಪವನ್ನು ಅರಿತುಕೊಂಡಿದ್ದ. ಜತೆಗೆ, ನಿತ್ಯ ಅಂಗಡಿ ಬಾಗಿಲು ಹಾಕಿ ರಾತ್ರಿ ಮನೆಗೆ ಹೋಗುವಾಗ ಇಡೀ ದಿನದ ವ್ಯವಹಾರದ ಹಣ ಹಾಗೂ ವಿದೇಶಿ ಕರೆನ್ಸಿಯನ್ನು ಸ್ಕೂಟರ್‌ನಲ್ಲಿಟ್ಟುಕೊಂಡು ಅರುಣ್‌ಕುಮಾರ್ ತೆರಳುವುದನ್ನೂ ನೋಡಿದ್ದ. ಈತ ಇತರ ಆರೋಪಿಗಳಿಗೆ ವಿಷಯ ತಿಳಿಸಿ ಅ. 22ರಂದು ವಿಜಯನಗರದ ಅವರ ನಿವಾಸದ ಬಳಿ ಅಡ್ಡಗಟ್ಟಿ, ಡ್ರಾಗನ್ ಚಾಕು ತೋರಿಸಿ ಸ್ಕೂಟರ್‌ ಸಮೇತ ಪರಾರಿಯಾಗಿದ್ದರು. ಆರೋಪಿಗಳಿಂದ ₹ 3.50 ಲಕ್ಷ ಹಾಗೂ ₹ 3.31 ಲಕ್ಷ ವಿದೇಶಿ ಕರೆನ್ಸಿ, ದರೋಡೆ ಹಣದಿಂದ ಖರೀದಿಸಿದ್ದ ಕಾರು, ಕದ್ದ ಸ್ಕೂಟರ್‌ ಒಟ್ಟು ₹ 8.50 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪತ್ತೆ ಕಾರ್ಯವನ್ನು ನಗರ ಅಪರಾಧ ವಿಭಾಗದ ಡಿಸಿಪಿ ಡಾ.ವಿಕ್ರಮ ವಿ. ಅಮಟೆ ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಎಸಿಪಿ ಗೋಪಾಲ್ ನೇತೃತ್ವದಲ್ಲಿ ವಿಜಯನಗರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಪಿಎಸ್‌ಐಗಳಾದ ಎನ್.ರಾಮಚಂದ್ರ, ಎಎಸ್‌ಐ ವೆಂಕಟೇಶಗೌಡ, ಸಿಬ್ಬಂದಿ ಶಂಕರ್, ಈಶ್ವರ್, ಸ್ವಾಮರಾಧ್ಯ, ಸಿ.ಮಹೇಶ್, ಶಿವಮೂರ್ತಿ, ಮಹದೇವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.