ಮೈಸೂರು: ದೇಶದ್ರೋಹ ಪ್ರಕರಣದಲ್ಲಿ ಆರೋಪಿಯ ಪರ ವಕಾಲತ್ತು ವಹಿಸದೇ ಇರುವಂತೆ ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿಯು ಕೈಗೊಂಡಿದ್ದ ನಿರ್ಣಯದ ಬಗ್ಗೆ ಚರ್ಚಿಸಲು, ಸಂಘವು ಜ.20ರಂದು ಸಾಮಾನ್ಯ ಸಭೆ ಕರೆದಿದೆ.
‘ಕೆಲವು ಸದಸ್ಯರು ಸಾಮಾನ್ಯ ಸಭೆ ಕರೆದು, ಕಾರ್ಯಕಾರಿ ಸಮಿತಿ ತೀರ್ಮಾನವನ್ನು ಚರ್ಚಿಸಬೇಕು ಎಂದು ಮನವಿ ಮಾಡಿದ್ದರು. ಹಾಗಾಗಿ, ನ್ಯಾಯಾಲಯದ ಆವರಣದಲ್ಲೇ ಸಭೆ ಕರೆಯಲಾಗಿದೆ’ ಎಂದು ಸಂಘದ ಕಾರ್ಯದರ್ಶಿ ಶಿವಣ್ಣ ಪ್ರತಿಕ್ರಿಯಿಸಿದರು.
ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಜ. 8ರಂದು ನಡೆದ ಪ್ರತಿಭಟನೆ ವೇಳೆ ಬಿ. ನಳಿನಿ ಎಂಬುವವರು ‘ಫ್ರೀ ಕಾಶ್ಮೀರ’ ಫಲಕ ಹಿಡಿದು ವಿವಾದಕ್ಕೆ ಒಳಗಾಗಿದ್ದರು. ನಂತರ, ಅವರ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ಈ ಮಧ್ಯೆ ನ್ಯಾಯಾಲಯದಿಂದ ನಳಿನಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಈ ವೇಳೆ, ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿಯು, ‘ದೇಶದ್ರೋಹ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ಯಾವುದೇ ವಕೀಲರು ವಕಾಲತ್ತು ವಹಿಸಬಾರದು’ ಎಂದು ನಿರ್ಣಯ ಕೈಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.