ADVERTISEMENT

ಗಣೇಶ ಹಬ್ಬದ ಹಿನ್ನೆಲೆ: ದಸರಾ ಆನೆಗಳಿಗೆ 'ಗಜಪೂಜೆ'

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 1:40 IST
Last Updated 1 ಸೆಪ್ಟೆಂಬರ್ 2022, 1:40 IST
ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಡಿಸಿಎಫ್ ಡಾ.ವಿ.ಕರಿಕಾಳನ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ 'ಗಜಪೂಜೆ' ಸಲ್ಲಿಸಿದರು
ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಡಿಸಿಎಫ್ ಡಾ.ವಿ.ಕರಿಕಾಳನ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ 'ಗಜಪೂಜೆ' ಸಲ್ಲಿಸಿದರು   

ಮೈಸೂರು: ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಗಣೇಶ ಚತುರ್ಥಿ ಪ್ರಯುಕ್ತ ಬುಧವಾರ 'ಗಜಪೂಜೆ' ಸಲ್ಲಿಸಲಾಯಿತು.

ಡಿಸಿಎಫ್ ಡಾ.ವಿ.ಕರಿಕಾಳನ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿ ಆನೆಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಅರಮನೆ ಅರ್ಚಕ ಪ್ರಹ್ಲಾದರಾವ್‌ ಆನೆಗಳಿಗೆ ಪಂಚಫಲ, ಕೋಡುಬಳೆ ಒಬ್ಬಟ್ಟು, ರವೆ ಉಂಡೆ, ಸಿಹಿಗಡುಬು, ಕರ್ಜಿಕಾಯಿ, ಲಾಡು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ಮೊದಲಾದ 'ಗಣೇಶ'ನ ಇಷ್ಟದ ತಿನಿಸುಗಳನ್ನು ಅಣಿಗೊಳಿಸಿದರು.

ADVERTISEMENT

ಆನೆಗಳ ಹಣೆ, ಸೊಂಡಿಲು, ಪಾದಗಳಿಗೆ ಅರಿಸಿನ, ಕುಂಕುಮ ಹಾಗೂ ಗಂಧವನ್ನು ಹಚ್ಚಿ ಸೇವಂತಿಗೆ ಹೂಗಳಿಂದ ಅಲಂಕರಿಸಲಾಯಿತು‌. ಚಾಮರವನ್ನು ಬೀಸಲಾಯಿತು. ಪಂಚಫಲ- ತಿನಿಸುಗಳನ್ನು ನೈವೇದ್ಯ ನೀಡಿ ‘ಶೋಡಷೋಪಚಾರ’ ಪೂಜೆ ಮಾಡಲಾಯಿತು.

ಅಧಿಕಾರಿಗಳು, ಮಾವುತರು, ಕಾವಾಡಿಗಳ ಮಕ್ಕಳನ್ನು ಆಹ್ವಾನಿಸಿದ ಅರ್ಚಕರು ಗಣಪತಿ ಸ್ತೋತ್ರ ಹೇಳಿಸಿದರು. ಚಿಣ್ಣರು ಆನೆಗಳಿಗೆ ಬಿಲ್ವಪತ್ರೆ, ಪುಷ್ಪ ನಮನ ಸಲ್ಲಿಸುತ್ತಿದ್ದಂತೆ ನೆರೆದಿದ್ದ ಎಲ್ಲರೂ ಹೂ ಮಳೆಗರೆದರು. ಡಿಸಿಎಫ್ ಕರಿಕಾಳನ್ ಆನೆಗಳಿಗೆ ಆರತಿ ಬೆಳಗಿದರು.

ಸಿಹಿ ತಿಂಡಿಗಳೊಂದಿಗೆ ಕಬ್ಬು, ಬೆಲ್ಲ, ಪಂಚಫಲಗಳನ್ನು ಆನೆಗಳಿಗೆ ತಿನ್ನಿಸಲಾಯಿತು.

ನಂತರ ಮಾತನಾಡಿದ ಡಿಸಿಎಫ್ ವಿ.ಕರಿಕಾಳನ್, 'ಗಣೇಶ ಹಬ್ಬದಂದು ಸಾಂಪ್ರದಾಯಿಕವಾಗಿ ಆನೆಗಳಿಗೆ ಗಜಪೂಜೆ ಮಾಡಲಾಗುತ್ತದೆ. ಎಲ್ಲ ಆನೆಗಳೂ ಆರೋಗ್ಯವಾಗಿದ್ದು, ನಡಿಗೆ ಹಾಗೂ ಭಾರ ಹೊರುವ ತಾಲೀಮನ್ನು ಆರಾಮಾಗಿ ನಿರ್ವಹಿಸುತ್ತಿವೆ' ಎಂದರು.

'ಮೂರನೇ ಸುತ್ತಿನ ಭಾರ ಹೊರಿಸುವ ತಾಲೀಮು ಆರಂಭವಾಗಿದೆ. ಅಂಬಾರಿ ಆನೆ ಅಭಿಮನ್ಯು 750 ಕೆ.ಜಿ‌ ಮರಳು ಮೂಟೆಯೊಂದಿಗೆ ನಮ್ದಾ ಗಾದಿ, ಹಗ್ಗ, ತೊಟ್ಟಿಲು ಸೇರಿ 1050 ಕೆ.ಜಿ. ತೂಕವನ್ನು ಹೊತ್ತಿದ್ದಾನೆ' ಎಂದು ಮಾಹಿತಿ ನೀಡಿದರು.

'ಎರಡನೇ ಹಾಗೂ ಮೂರನೇ ದಿನ ಗೋಪಾಲಸ್ವಾಮಿ ಹಾಗೂ ಧನಂಜಯ ಕ್ರಮವಾಗಿ 900 ಕೆ.ಜಿ ಭಾರ ಹೊತ್ತು ಬನ್ನಿಮಂಟಪಕ್ಕೆ ಹೋಗಿ ಬಂದಿವೆ. ಮಹೇಂದ್ರ ಹಾಗೂ ಭೀಮ ಇಬ್ಬರೂ 500 ಕೆ.ಜಿ ಭಾರ ಹೊತ್ತಿದ್ದಾರೆ' ಎಂದರು.

ಮಹೇಂದ್ರ, ಭೀಮ: ಭಲೇ ಭಲೇ!

2017ರ ದಸರೆಗೆ ಬಂದಿದ್ದ ಭೀಮ ಹಾಗೂ ಇದೇ ಮೊದಲ ಬಾರಿ ಬಂದಿರುವ ಮಹೇಂದ್ರ ಭಾರ ಹೊರುವ ತಾಲೀಮನ್ನು ಆರಾಮದಾಯಕವಾಗಿ ಮಾಡಿರುವುದು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಸಂತಸ ಮೂಡಿಸಿದೆ.

ಡಿಸಿಎಫ್ ಕರಿಕಾಳನ್ ಎರಡೂ ಆನೆಗಳ ಬಗ್ಗೆ ಭರವಸೆಯ ಮಾತುಗಳನ್ನಾಡಿರುವುದು ಅಭಿಮನ್ಯು ನಂತರ ಅಂಬಾರಿ ಹೊರುವ ಜವಾಬ್ದಾರಿಯನ್ನು ಈ‌ ಆನೆಗಳು ನಿರ್ವಹಿಸಲಿವೆ. ಗೋಪಾಲಸ್ವಾಮಿ, ಧನಂಜಯ ಆನೆಗಳ ನಂತರ ಮೂರನೇ ಸಾಲಿನ ಆನೆಗಳಾಗಿ ಹೊರಹೊಮ್ಮಿವೆ.

'ಸಾಮಾನ್ಯವಾಗಿ ಮೊದಲ ಬಾರಿ ಬಂದ ಆನೆಗಳಿಗೆ ಮರಳು ಮೂಟೆ ತಾಲೀಮು ನೀಡುವುದಿಲ್ಲ. ಭೀಮ, ಮಹೇಂದ್ರ 500 ಕೆ.ಜಿ. ಮರಳು ಮೂಟೆ ತಾಲೀಮು ಮಾಡಿವೆ. ಹಿರಿಯ ಆನೆಗಳಾದ ಅರ್ಜುನ, ಅಭಿಮನ್ಯು ಅನುಭವದಲ್ಲಿ ತಾಲೀಮು ನಡೆಸುತ್ತಿವೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

7ರಂದು ಎರಡನೇ ತಂಡ: ಸೆ.7ರಂದು ಗಜಪಡೆಯ ಎರಡನೇ ತಂಡವು ನಗರಕ್ಕೆ ಆಗಮಿಸಲಿದೆ. ಶ್ರೀರಾಮ, ಪಾರ್ಥಸಾರಥಿ, ಗೋಪಿ, ವಿಜಯಾ, ವಿಕ್ರಮ ಆನೆಗಳು ಈ ತಂಡದಲ್ಲಿವೆ.

'ಹೊಸ ಆನೆಗಳೊಂದಿಗೆ ಮೊದಲ ತಂಡದ ಆನೆಗಳ ತೂಕ ಪರೀಕ್ಷೆ ನಡೆಯಲಿದೆ. 9 ಆನೆಗಳಿಗೆ ವಿಶೇಷ ಆಹಾರ, ತಾಲೀಮು ನೀಡುತ್ತಿರುವುದರಿಂದ ಅವುಗಳ ತೂಕ 200ರಿಂದ 300 ಕೆ.ಜಿ ಹೆಚ್ಚಾಗಿದೆ' ಎಂದು ಕರಿಕಾಳನ್ ಹೇಳಿದರು.

5ರಂದು ಮರದ ಅಂಬಾರಿ ತಾಲೀಮು: ಮರದ ಅಂಬಾರಿಗೆ ಪೂಜೆ ಸಲ್ಲಿಸಿ 5ರಂದು ತಾಲೀಮು ಆರಂಭವಾಗಲಿದೆ. ಅಭಿಮನ್ಯು, ಗೋಪಾಲಸ್ವಾಮಿ, ಧನಂಜಯ ಈ ತಾಲೀಮಿನಲ್ಲಿ ಪಾಲ್ಗೊಳ್ಳುವ ಆನೆಗಳು.

'ಸೆ.8 ಅಥವಾ 9ರಂದು ಆನೆಗಳಿಗೆ ಕುಶಾಲ ತೋಪು ಅಭ್ಯಾಸ ನಡೆಸಲಾಗುವುದು. ಜಂಬೂಸವಾರಿಗೂ ಮುನ್ನ ಆನೆಗಳಿಗೆ ಮೂರು ಬಾರಿ ಸಿಡಿಮದ್ದಿನ ಅಭ್ಯಾಸವನ್ನು ನೀಡಲಾಗುವುದು’ ಎಂದು ಕರಿಕಾಳನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.