ADVERTISEMENT

ಗಣೇಶ ಮೂರ್ತಿ: ಶ್ರಮಿಕರ ಸ್ಮರಣೆ

ಎಚ್.ಎಸ್.ಸಚ್ಚಿತ್
Published 20 ಆಗಸ್ಟ್ 2020, 6:03 IST
Last Updated 20 ಆಗಸ್ಟ್ 2020, 6:03 IST
ಹುಣಸೂರು ನಗರದ ಚಿತ್ರಕಲಾ ಶಿಕ್ಷಕ ನಾಗಲಿಂಗಪ್ಪ ಬಡಿಗೇರ ಗಣಪತಿ ಮೂರ್ತಿ ಸಿದ್ದಪಡಿಸುತ್ತಿರುವುದು
ಹುಣಸೂರು ನಗರದ ಚಿತ್ರಕಲಾ ಶಿಕ್ಷಕ ನಾಗಲಿಂಗಪ್ಪ ಬಡಿಗೇರ ಗಣಪತಿ ಮೂರ್ತಿ ಸಿದ್ದಪಡಿಸುತ್ತಿರುವುದು   

ಹುಣಸೂರು: ಗಣಪತಿಬಪ್ಪ ಮೋರೆಯಾ... ಗಣೇಶ ಹಬ್ಬ ಆಚರಿಸುವುದರೊಂದಿಗೆ ಮೂರ್ತಿ ಸಿದ್ಧಪಡಿಸುವವರ ತಿಂಗಳುಗಟ್ಟಲೇ ಶ್ರಮ ಸ್ಮರಿಸುವುದು ಕೂಡಾ ಅತ್ಯಗತ್ಯ.

ಹುಣಸೂರು ನಗರದ ಬ್ರಾಹ್ಮಣರ ಬೀದಿಯ ನಿವಾಸಿ ನಾಗಲಿಂಗಪ್ಪ ರಾ. ಬಡಿಗೇರ ಮತ್ತು ಉಮಾ ದಂಪತಿ ಕಳೆದ 20 ವರ್ಷಗಳಿಂದ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡು ವಿವಿಧ ಮೂರ್ತಿಗಳನ್ನು ಸಿದ್ಧಪಡಿಸಿ ಹೆಸರು ಪಡೆದಿದ್ದಾರೆ.

ಚಿತ್ರಕಲಾ ಶಿಕ್ಷಕರಾಗಿರುವ ನಾಗಲಿಂಗಪ್ಪ ಮೂಲತಃ ಶಿಲ್ಪಕಲಾ ಕೌಶಲ ಹಿನ್ನೆಲೆಯುಳ್ಳವರು. ಚಿತ್ರಕಲೆ ಮತ್ತು ಮಣ್ಣಿನ ಕರಕುಶಲತೆ ಮೈಗೂಡಿಸಿಕೊಂಡಿದ್ದ ಸೋದರ ಮಾವ ಚಂದ್ರಶೇಖರ್ ಇವರೊಂದಿಗೆ ಬಾಲ್ಯದಿಂದಲೇ ಕೈಜೋಡಿಸಿ ಸಣ್ಣ ಮೂರ್ತಿಗಳನ್ನು ಸಿದ್ಧಪಡಿಸುವ ಹವ್ಯಾಸ ರೂಢಿಸಿಕೊಂಡು ಶಿಲ್ಪಕಲಾವಿದರಾಗಿದ್ದಾರೆ.

ADVERTISEMENT

ಗಣೇಶೋತ್ಸವಕ್ಕೆ ಇವರ ಮನೆಯಲ್ಲಿ ಮೂರು ತಿಂಗಳಿಂದ ಗಣಪತಿ ಮೂರ್ತಿ ಸಿದ್ಧಪಡಿಸಲಾಗುತ್ತಿದೆ. ತಾಲ್ಲೂಕಿನ ಕಲ್ಲಹಳ್ಳಿ, ಮೋದೂರು ಮತ್ತು ಬಿಳಿಗೆರೆ ಗ್ರಾಮದ ಕೆರೆಗಳಲ್ಲಿ ಜೇಡಿ ಮಣ್ಣು ಸಂಗ್ರಹಿಸಿ ಹದಗೊಳಿಸಿ, ಅದಕ್ಕೆ ಹತ್ತಿ ಬೆರೆಸಿ ಗಣಪಮೂರ್ತಿ ಸಿದ್ದಪಡಿಸಲು ಆರಂಭಿಸುತ್ತೇವೆ ಎನ್ನುತ್ತಾರೆ ನಾಗಲಿಂಗಪ್ಪ.

ಗಣಪಮೂರ್ತಿ ಸಿದ್ದಪಡಿಸುವಲ್ಲಿ ಪತ್ನಿ ಉಮಾ ಸಹಕಾರ ಹೆಚ್ಚಿದೆ. ಚಿತ್ರಕಲಾವಿದರಾದ ಉಮಾ ಶಿಲ್ಪಕಲೆಯಲ್ಲಿ ಪಳಗಿದ್ದು, ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಕೈಚಳಕ ಹೆಚ್ಚಿದೆ.

ವೃತ್ತಿ ಜೀವಂತಿಕೆ: ಗಣೇಶ ಮೂರ್ತಿಗಳನ್ನು ವ್ಯಾಪಾರಕ್ಕಲ್ಲದೆ ಕಲೆ ಜೀವಂತವಾಗಿ ಉಳಿಸಲು ಕುಟುಂಬದ ಕಲೆ ಹಾಗೂ ಕಲಿತ ವಿದ್ಯೆ ಮರೆಯಬಾರದು ಎಂಬ ದೃಷ್ಟಿಯಿಂದ ಗಣೇಶ ಮೂರ್ತಿಗಳನ್ನು ಸಿದ್ದಪಡಿಸುವೆ. ಸ್ನೇಹಿತರು ಹಾಗೂ ಬಡಾವಣೆ ಸಾಕಷ್ಟು ಜನರು ಖರೀದಿಸುತ್ತಿದ್ದಾರೆ. ಈ ಕೆಲಸ ಕಳೆದ 11 ವರ್ಷಗಳಿಂದ ನಿರಂತರವಾಗಿ ಮಾಡುತ್ತಿದ್ದೇನೆ ಎಂದು ವಿವರಿಸಿದರು.

ಮೂರು ಶೈಲಿಯಲ್ಲಿ ಮೂರ್ತಿ ತಯಾರಿ: ಮೂರು ಶೈಲಿಯಲ್ಲಿ ಗಣೇಶ ಸಿದ್ದಪಡಿಸಲಾಗುತ್ತದೆ. ಮೈಸೂರು, ಹುಬ್ಬಳ್ಳಿ ಮತ್ತು ಮುಂಬೈ ಶೈಲಿಗಳಿದ್ದು, ಮುಂಬೈ ಶೈಲಿಯ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕಾರಣ ಈ ವಿಗ್ರಹದಲ್ಲಿ ಪ್ರತಿಯೊಂದು ಅಂಗವೂ ಆಕರ್ಷಣೀಯವಾಗಿರುತ್ತದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.