ADVERTISEMENT

ಮುಡಾ ಅಧ್ಯಕ್ಷ ಸ್ಥಾನ ಪುನಃ ರಾಜೀವ್‌ಗೆ ಕೊಡಿ: ಬಿ.ಎಲ್‌. ಭೈರಪ್ಪ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 7:46 IST
Last Updated 23 ಜುಲೈ 2022, 7:46 IST
ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ಮಾಜಿ ಮೇಯರ್‌ ಬಿ.ಎಲ್‌. ಭೈರಪ್ಪ ಮಾತನಾಡಿದರು. ವಾಸು, ನಾಗೇಶ್‌ ಇದ್ದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ಮಾಜಿ ಮೇಯರ್‌ ಬಿ.ಎಲ್‌. ಭೈರಪ್ಪ ಮಾತನಾಡಿದರು. ವಾಸು, ನಾಗೇಶ್‌ ಇದ್ದರು.   

ಮೈಸೂರು: ‘ನಗರದ ಅಭಿವೃದ್ಧಿಗಾಗಿ ಅನೇಕ ರಚನಾತ್ಮಕ ಕಾರ್ಯಗಳನ್ನು ಮಾಡಿರುವ ಎಚ್‌.ವಿ.ರಾಜೀವ್‌ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಸ್ಥಾನವನ್ನು ಪುನಃ ನೀಡಬೇಕು’ ಎಂದು ಮಾಜಿ ಮೇಯರ್‌ ಬಿ.ಎಲ್‌. ಭೈರಪ್ಪ ಮನವಿ ಮಾಡಿದರು.

‘ರಾಜ್ಯ ಸರ್ಕಾರವು 12 ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಿದೆ. ಮುಡಾ ಅಧ್ಯಕ್ಷರಾಗಿದ್ದ ಎಚ್‌.ವಿ.ರಾಜೀವ್‌ ಅವರು ಕಟ್ಟಡಕ್ಕೆ ಎನ್‌ಒಸಿ, ಖಾತೆ ಮಾಡಿಕೊಡುವ ಪದ್ಧತಿ ಸರಳೀಕರಣ, ನಕ್ಷೆ ಮಂಜೂರಾತಿಗೆ ಏಕಗವಾಕ್ಷಿ ವ್ಯವಸ್ಥೆ, ಸಿಎ ನಿವೇಶನಗಳ ಮಂಜೂರು, ಕಟ್ಟಡ ತ್ಯಾಜ್ಯ ಸಂಸ್ಕರಣೆಗಾಗಿ ಸಾತಗಳ್ಳಿಯಲ್ಲಿ 7 ಎಕರೆ ಮಂಜೂರು ಮಾಡಿಸಿದ್ದರು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹೊರವರ್ತುಲ ರಸ್ತೆ ಭಾಗದ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಸರ್ಕಾರದಿಂದ ₹150 ಕೋಟಿ ಅನುದಾನವನ್ನು ತಂದಿದ್ದು, ಈ ಪೈಕಿ ₹60 ಕೋಟಿ ಮಂಜೂರಾಗಿ ಕಾರ್ಯಾದೇಶವನ್ನೂ ನೀಡಲಾಗಿದೆ. ಮುಡಾದಲ್ಲಿ ₹300 ಕೋಟಿ ಮೊತ್ತದ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದವು. ಅವುಗಳಿಗೆ ಸರ್ಕಾರದಿಂದ ಒಪ್ಪಿಗೆ ತಂದಿದ್ದು, ಕೆಲಸಗಳು ನಡೆಯುತ್ತಿವೆ. ಜತೆಗೆ ನಗರದ ಹಸಿರೀಕರಣಕ್ಕೆ ಒತ್ತು ನೀಡಿದ್ದ ರಾಜೀವ್‌, 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಿದ್ದರು. ಹೀಗೆ, ಮೈಸೂರಿನ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರು’ ಎಂದು ಶ್ಲಾಘಿಸಿದರು.

ADVERTISEMENT

‘ಮುಂದೆ ಮುಡಾ ಅಧ್ಯಕ್ಷರಾಗುವವರು ಎಚ್‌.ವಿ.ರಾಜೀವ್‌ ಅವರ ಕಾರ್ಯಗಳನ್ನೇ ಮುಂದುವರಿಸಿಕೊಂಡು ಹೋಗಬೇಕು’ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಟೆನಿಸ್‌ ಅಕಾಡೆಮಿಯ ವಾಸು, ಕಾರ್ಯಕರ್ತ ನಾಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.