ADVERTISEMENT

ಮುಡಾ: ತುಂಡು ಭೂಮಿ ಹಂಚಿಕೆಗೆ ತಡೆ!

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 15:01 IST
Last Updated 17 ಮಾರ್ಚ್ 2023, 15:01 IST

ಮೈಸೂರು: ಭೂ ಪರಿಹಾರವಾಗಿ ಜಾಗ ನೀಡುವುದು ಹಾಗೂ ತುಂಡು ಭೂಮಿ ಹಂಚಿಕೆ ವಿಷಯದಲ್ಲಿ ಮಾರ್ಗಸೂಚಿ ರೂಪಿಸುವವರೆಗೆ ಯಾವುದೇ ನಿರ್ಣಯ ಕೈಗೊಳ್ಳದಂತೆ ನಗರಾಭಿವೃದ್ಧಿ ಇಲಾಖೆಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಈಚೆಗೆ ಪತ್ರ ಬರೆದು ತಾಕೀತು ಮಾಡಿದೆ.

‘ಬದಲಿ ನಿವೇಶನಗಳ ಮಂಜೂರಿಗೆ ಇತ್ತೀಚಿನ ಸಭೆಗಳಲ್ಲಿ ಪ್ರಾಧಿಕಾರವು ತೀರ್ಮಾನಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ನಿವೇಶನಗಳ ಹಂಚಿಕೆ) ನಿಯಮಗಳಿಗೆ ವ್ಯತಿರಿಕ್ತವಾಗಿ ಹಲವು ಪ್ರಕರಣಗಳಲ್ಲಿ ಕ್ರಮ ವಹಿಸಲಾಗಿದೆ. ಆಯುಕ್ತರು ನಿಯಮದ ಅವಕಾಶಗಳನ್ನು ಉಲ್ಲಂಘಿಸಿ ಬದಲಿ ನಿವೇಶನ ಮಂಜೂರು ಮಾಡುವ ಬಗ್ಗೆ ಕ್ರಮ ವಹಿಸಿರುವುದು ಕಂಡು ಬಂದಿದೆದ’ ಅತೃಪ್ತಿ ವ್ಯಕ್ತಪಡಿಸಿದೆ.

‘ಹಲವು ಪ್ರಕರಣಗಳಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡಿಲ್ಲವೆಂದು ಬದಲಿಯಾಗಿ ಅಭಿವೃದ್ಧಿ ಹೊಂದಿದ ಜಾಗದಲ್ಲಿ ಬೆಲೆ ಬಾಳುವ ಆಸ್ತಿಗಳನ್ನು ಹಂಚಿಕೆ ಮಾಡುತ್ತಿರುವುದು ಹಾಗೂ ಶೇ.50:50 ಅನುಪಾತವನ್ನು ಅನುಸರಿಸಿರುವುದು ಕಂಡುಬಂದಿದೆ. ಈ ನಿರ್ಧಾರವನ್ನು ಯಾವ ನಿಯಮದಲ್ಲಿ ಮಾಡಲಾಗಿದೆ ಎಂಬ ವಿವರವನ್ನು ಉಲ್ಲೇಖಿಸಿಲ್ಲ. ತುಂಡು ಭೂಮಿ ಹಂಚಿಕೆ ಮತ್ತು ಭೂ ಪರಿಹಾರವಾಗಿ ಬದಲಿ ಜಾಗ ನೀಡಿರುವ ಪ್ರಕರಣಗಳಲ್ಲಿ ಕಾಯ್ದೆ ಮತ್ತು ನಿಯಮಗಳಿಗೆ ವ್ಯತಿರಿಕ್ತವಾಗಿ ಕ್ರಮ ವಹಿಸಿದರೆ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ತಿಳಿಸಲಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆಗೆ ‘ಮುಡಾ’ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.