ADVERTISEMENT

ಮುಡುಕುತೊರೆ ಜಾತ್ರೆಯಲ್ಲಿ ಹಳ್ಳಿಕಾರ್ ರಾಸುಗಳ ವೈಭವ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 15:45 IST
Last Updated 11 ಫೆಬ್ರುವರಿ 2024, 15:45 IST
ಮುಡುಕುತೊರೆ ಜಾತ್ರೆಗೆ ಬಂದಿರುವ ರಾಸುಗಳು
ಮುಡುಕುತೊರೆ ಜಾತ್ರೆಗೆ ಬಂದಿರುವ ರಾಸುಗಳು   

ತಲಕಾಡು: ಸೋಮಶೈಲ ಪರ್ವತವೆಂದು ಖ್ಯಾತ ಪಡೆದಿರುವ ಸಮೀಪದ ಮುಡುಕುತೊರೆಯ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನ ಸ್ವಾಮಿ ದನಗಳ ಜಾತ್ರೆ ಭಾನುವಾರದಿಂದ ಆರಂಭಗೊಂಡಿದ್ದು, ಫೆ. 17ರವರೆಗೆ ದನಗಳ ಜಾತ್ರೆ ಹಾಗೂ 27ರವರೆಗೆ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಈಗಾಗಲೇ ರಾಸುಗಳ ಮಾಲೀಕರು ಜಾತ್ರಾ ಮೈದಾನಕ್ಕೆ ತಮ್ಮ ದೇಸಿ ತಳಿ ಹಳ್ಳಿಕಾರ್ ಹೋರಿಗಳು, ಎತ್ತುಗಳನ್ನು ತಂದು ತಮ್ಮ ರಾಸುಗಳ ಪ್ರದರ್ಶನಕ್ಕೆ ಸೂಕ್ತ ಸ್ಥಳವನ್ನು ನಿಗದಿ ಮಾಡಿಕೊಳ್ಳುವ ಕಾಯಕ ಭರದಿಂದ ಸಾಗಿದೆ. ಜಾತ್ರಾ ಮೈದಾನವೆಲ್ಲ ಹಳ್ಳಿಕಾರ್ ತಳಿಗಳ ವೈಭವವು ನೋಡುಗರಿಗೆ, ಮಾರಾಟ ಮಾಡುವವರಿಗೆ ಕೊಳ್ಳುವವರಿಗೆ ಉತ್ಸಾಹ ತಂದಿದೆ.

ದೇವಾಲಯದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಈ ಬಾರಿ ಬ್ರಹ್ಮರಥೋತ್ಸವ, ತೆಪ್ಪೋತ್ಸವ ಹಾಗೂ ಬಸವನ ಮಾಲೆಗಳನ್ನು ರದ್ದುಪಡಿಸಲಾಗಿದೆ.

ADVERTISEMENT

ಫೆ 17ರವರೆಗೆ ದನಗಳ ಜಾತ್ರೆಗೆ ಅವಕಾಶ ನೀಡಲಾಗಿದೆ. ರಾಸುಗಳು ಮತ್ತು ಭಕ್ತರಿಗೆ ಮೂಲ ಸೌಕರ್ಯಗಳನ್ನು ಸಕಲ ರೀತಿಯಲ್ಲಿ ಒದಗಿಸಲಾಗಿದೆ ಎಂದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಚಾಮರಾಜನಗರ, ಮೈಸೂರು, ಕೋಲಾರ, ಮಂಡ್ಯ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಿಂದ ರಾಸುಗಳು ಈಗಾಗಲೇ ಬಂದಿವೆ.

ಮುಡುಕುತೊರೆ ಜಾತ್ರೆ ಪುರಾತನ ಕಾಲದಿಂದ ಸಂಪ್ರದಾಯ ಬದ್ಧವಾಗಿ ನಡೆದುಕೊಂಡು ಬರುತ್ತಿರುವ ಕರ್ನಾಟಕ ರಾಜ್ಯದಲ್ಲೇ ದೊಡ್ಡ ಜಾತ್ರೆಯಾಗಿದ್ದು ಜಾತ್ರೆಗಳಲ್ಲಿ ರಾಸುಗಳ ಪ್ರದರ್ಶನ ತಲೆ ತಲೆಮಾರುಗಳಿಂದ ನಡೆದುಕೊಂಡು ಬರುತ್ತಿದೆ.

‘ನಾವು ಸಾಕಿದ ರಾಸುಗಳನ್ನು ನಮ್ಮ ಗ್ರಾಮಗಳಲ್ಲಿ, ಜಾತ್ರಾ ಮೈದಾನಗಳಲ್ಲಿ ಮೆರವಣಿಗೆ ನಡೆಸಿ ಅಲಂಕೃತಗೊಂಡ ಚಪ್ಪರದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಇಂತಹ ಹವ್ಯಾಸವು ನೂರಾರು ವರ್ಷಗಳಿಂದಲೂ ಸಾವಿರಾರು ರಾಸು ಕುಟುಂಬದವರು ರಾಜ್ಯದ ನಾನಾ ಭಾಗಗಳಿಂದ ರಾಸು ತಂದು ಪ್ರದರ್ಶನ ನೀಡುವುದರ ಜೊತೆಗೆ ಮಲ್ಲಪ್ಪನ ದರ್ಶನ ಪಡೆದು ಕೃತಾರ್ಥರಾಗಬೇಕೆಂದು ಜಾತ್ರಾ ಮಹೋತ್ಸವಕ್ಕೆ ಬರುತ್ತೇವೆ’ ಎಂದು ರಾಸು ಮಾಲೀಕ ಮಂಡ್ಯದ ಕೆಂಪೇಗೌಡ ತಮ್ಮ ಅನಿಸಿಕೆ ತಿಳಿಸಿದರು.

ಮುಡುಕುತೊರೆ ಜಾತ್ರೆಗೆ ಬಂದಿರುವ ರಾಸುಗಳು
ಭ್ರಮರಂಬಾ ಸಮೇತ ಮಲ್ಲಿಕಾರ್ಜುನ ದೇವಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.