
ಮೈಸೂರು: ‘ಕಾಂಗ್ರೆಸ್ನಲ್ಲಿ ಈಗ ಎಲ್ಲವೂ ಸರಿ ಇಲ್ಲ. ಅಶಿಸ್ತು ಎದ್ದು ಕಾಣುತ್ತಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸುವಲ್ಲಿ ವಿಳಂಬವಾದಷ್ಟೂ ನಷ್ಟ ಹೆಚ್ಚುತ್ತಾ ಹೋಗುತ್ತದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ತನ್ವೀರ್ ಸೇಠ್ ಹೇಳಿದರು.
ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ಕಾಂಗ್ರೆಸ್ನಲ್ಲಿ ಬೆಂಕಿಯೂ ಇದೆ, ಹೊಗೆಯೂ ಹರಡಿದೆ. ಇದು ಅಪಾಯಕಾರಿ ಬೆಳವಣಿಗೆಯ ಹಂತ ತಲುಪಿದೆ’ ಎಂದರು.
‘ಸಚಿವ ಸ್ಥಾನದ ಆಕ್ಷಾಂಕಿಗಳ ಪಟ್ಟಿ ದೊಡ್ಡದಿದೆ. ಮುಖ್ಯಮಂತ್ರಿಯಾಗಬೇಕೆಂಬುವವರ ಪಟ್ಟಿಯೂ ಬೆಳೆಯುತ್ತಿದೆ. ಯಾವ ಸಂದರ್ಭದಲ್ಲಿ ಏನು ಮಾತುಕತೆ ನಡೆದಿತ್ತೋ ಗೊತ್ತಿಲ್ಲ. ಅಧಿಕಾರ ಹಸ್ತಾಂತರದ ವಿಚಾರವಿದ್ದರೆ ಬೇಗ ಬಗೆಹರಿಸಬೇಕು. ಇಲ್ಲದಿದ್ದರೆ ದೊಡ್ಡ ಸಮಸ್ಯೆಯಾಗುವುದು ಖಚಿತ. ಅಪಘಾತ, ಆಘಾತ ಎರಡೂ ಆಗುತ್ತದೆ. ಇದು ಹತ್ತಿರವೇ ಇದೆ’ ಎಂದರು.
‘ಈಗ ನಡೆದಿರುವ ಬೆಳವಣಿಗೆಗಳು ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲ ಅವರಿಗೆ ಈ ಪರಿಸ್ಥಿತಿಯನ್ನೆಲ್ಲಾ ವಿವರಿಸಿದ್ದೇನೆ. ಶೀಘ್ರದಲ್ಲೇ ನಿರ್ಧರಿಸಿ, ಸ್ಪಷ್ಟವಾಗಿ ತಿಳಿಸಿ ಎಂದೂ ಹೇಳಿದ್ದೇನೆ’ ಎಂದರು.
‘ಪಕ್ಷವನ್ನು ವೈಯಕ್ತಿಕವಾಗಿ ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ವೈಯಕ್ತಿಕ ಹೇಳಿಕೆ ಹೈಕಮಾಂಡ್ ಮಾತಲ್ಲ. ಸಿದ್ದರಾಮಯ್ಯ ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತಾರೆ, ಬೇರೆಯವರು ಬರುತ್ತಾರಾ ಎಂಬುದು ಗೊತ್ತಿಲ್ಲ. ಬದಲಾವಣೆ ಇದೆಯೋ, ಇಲ್ಲವೋ ಎನ್ನುವುದನ್ನು ಹೈಕಾಂಡ್ ಹೇಳಬೇಕು’ ಎಂದು ಒತ್ತಾಯಿಸಿದರು.
‘ಪಕ್ಷದ ಸಿದ್ಧಾಂತ ಒಪ್ಪಿದವರು ಅಧಿಕಾರ ಸಿಕ್ಕರೂ ಇರುತ್ತಾರೆ, ಇಲ್ಲದಿದ್ದರೂ ಉಳಿಯುತ್ತಾರೆ. ಕೆಲವರು ಅಧಿಕಾರದ ಆಸೆಗಾಗಿ ಸೇರಿದ್ದಾರೆ. ಹೀಗಾಗಿ, ಮುಂದೆ ಏನೆಲ್ಲಾ ಆಗಬಹುದು ಎಂಬ ಲೆಕ್ಕಾಚಾರವನ್ನು ಹೈಕಮಾಂಡ್ ಮಾಡುತ್ತಿದೆ ಎನಿಸುತ್ತಿದೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.