ನಂಜನಗೂಡು: ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಶುಕ್ರವಾರ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬೆಳಿಗ್ಗೆ 6 ಗಂಟೆಗೆ ದೇವೇಗೌಡ ದಂಪತಿ ದೇವಸ್ಥಾನಕ್ಕೆ ಬಂದರು. ಈ ವೇಳೆ, ಸ್ವಾಮಿಗೆ ಅಭಿಷೇಕ ನಡೆಯುತ್ತಿತ್ತು. ಇದರಿಂದ ದೇವಾಲಯದ ಪ್ರಾಂಗಣದಲ್ಲಿ ಅರ್ಧ ಗಂಟೆ ಕಾದು ಕುಳಿತರು. ಅಭಿಷೇಕ, ಮಹಾ ಮಂಗಳಾರತಿ ಮುಗಿದ ನಂತರ ದೇವರ ದರ್ಶನ ಪಡೆದರು. ದೇವೇಗೌಡ ದಂಪತಿಗೆ ದೇವಾಲಯದ ವತಿಯಿಂದ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ‘ಕಾರ್ತೀಕ ಮಾಸದಲ್ಲಿ ಕುಟುಂಬ ಸಮೇತ ತಪ್ಪದೆ ಶಿವನ ದರ್ಶನ ಪಡೆಯುವುದು ವಾಡಿಕೆ. ಅದರಂತೆ ದೇವರ ದರ್ಶನ ಪಡೆದಿದ್ದೇವೆ. ದೇವರ ಸೇವೆಗೆ ಬಂದಿದ್ದೇನೆ. ಹೀಗಾಗಿ, ರಾಜಕೀಯ ವಿಚಾರ ಮಾತನಾಡುವುದಿಲ್ಲ’ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹ ಸ್ವಾಮಿ ಅವರ ಮನೆಗೆ ತೆರಳಿ ಉಪಾಹಾರ ಸೇವಿಸಿದ ನಂತರ ಬೆಂಗಳೂರಿಗೆ ಹೊರಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.