ಮೈಸೂರು: ‘ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಲಂಚದ ಪ್ರಮಾಣವು ಶೇ 60ರಷ್ಟು ತಲುಪಿದ್ದು, ಪಕ್ಷದ ಕಾರ್ಯಕರ್ತರೇ ಇದನ್ನು ಒಪ್ಪಿಕೊಂಡಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಭಾನುವಾರ ಇಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಬಡವರಿಗೆ ಮನೆ ಹಂಚಿಕೆಯಲ್ಲೂ ಲಂಚ ಹೊಡೆಯಲಾಗುತ್ತಿದೆ. ಮೊದಲು ಪಿಡಿಒ ಲಂಚ ಪಡೆಯುತ್ತಿದ್ದರು. ಈಗ ವಿಧಾನಸೌಧದಲ್ಲಿ ಸಚಿವರೇ ರಾಜಾರೋಷವಾಗಿ ಲಂಚ ಪಡೆಯುತ್ತಿದ್ದಾರೆ. ಸತ್ಯಮೇವ ಜಯತೇ ಎಂದರೆ ಇದೇನಾ? ಇವರ ಸತ್ಯಮೇವ ಜಯತೆ ಬರೀ ಜಾಹೀರಾತಿಗೆ ಸೀಮಿತವಾಗಿದೆ’ ಎಂದು ದೂರಿದರು.
‘ರಾಜ್ಯದ ಗುತ್ತಿಗೆದಾರರ ಪರಿಸ್ಥಿತಿ ಶೋಚನೀಯವಾಗಿದೆ. ಇವತ್ತಿನ ಪರಿಸ್ಥಿತಿ ನೋಡಿದರೆ, ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎಂದು ಕಾಂಗ್ರೆಸ್ ಪರವಾಗಿರುವ ಗುತ್ತಿಗೆದಾರರೇ ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಬೆಲೆ ತರಬೇಕಾಗುತ್ತದೆ’ ಎಂದು ಎಚ್ಚರಿಸಿದರು. ‘ಹಣ ಲೂಟಿ ಮಾಡುವುದಕ್ಕೆ ಇತಿಮಿತಿ ಇಲ್ಲವಾ?’ ಎಂದು ಕೇಳಿದರು.
‘ಅತ್ತೆಯದನ್ನು ಅಳಿಯ ದಾನ ಮಾಡಿದ ಎನ್ನುವ ಮಾತಿನಂತೆ ಅವರಿಂದ ಕಿತ್ತು ಮತ್ತೊಬ್ಬರಿಗೆ ಕೊಡುವುದಕ್ಕೆ ಇವರೇ ಆಗಬೇಕಾ? ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಯಾವುದೇ ಮಂತ್ರಿ– ಶಾಸಕರ ಮಕ್ಕಳು ಸರ್ಕಾರಿ ಬಸ್ನಲ್ಲಿ ಓಡಾಡುವುದಿಲ್ಲ. ಓಡಾಡುವವರೆಲ್ಲಾ ಜನಸಾಮಾನ್ಯರು. ದಿನಕ್ಕೆ ₹10 ಹೆಚ್ಚಿಗೆ ಖರ್ಚಾದರೂ ಅದು ಅವರಿಗೆ ಹೊರೆಯಾಗಲಿದೆ’ ಎಂದರು.
‘ಬಸ್ ದರ ಪ್ರಶ್ನಿಸಿದರೆ, ಕೆಜಿಗೆ ₹ 500 ಆದರೂ ಮಾಂಸ ಖರೀದಿಸಿ ತಿನ್ನುವುದಿಲ್ಲವಾ ಎಂದು ಸಚಿವರೊಬ್ಬರು ಹಾರಿಕೆಯ ಮಾತನಾಡುತ್ತಾರೆ. ಬಡವರು ಮಾಂಸ ತಿನ್ನುವುದರ ಮೇಲೆ ಇವರಿಗೇಕೆ ಕಣ್ಣು? ಬಡ ಮಧ್ಯಮ ವರ್ಗದವರು ವಾರಕ್ಕೆ ಒಮ್ಮೆ ಮಾಂಸ ಖರೀದಿ ಮಾಡಲು ಎಷ್ಟು ಕಷ್ಟಪಡುತ್ತಾರೆ ಎನ್ನುವುದು ಇವರಿಗೆ ಗೊತ್ತಾ? ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆ ಸಚಿವರಿಗೆ ಅಷ್ಟೂ ಪರಿಜ್ಞಾನ ಬೇಡವೇ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಹೇಗಾದರೂ ಮಾಡಿ ನಿಲ್ಲಿಸಬೇಕೆಂದು ನೆಪಗಳನ್ನು ಹುಡುಕುತ್ತಿದೆ. ಮಧ್ಯಮ ವರ್ಗದ ಜನರ ಬದುಕಿನ ಜತೆ ರಾಜ್ಯ ಸರಕಾರ ಚೆಲ್ಲಾಟವಾಡುತ್ತಿದೆಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.