ADVERTISEMENT

ಮಾನವ ಹಕ್ಕನ್ನು ಸಂರಕ್ಷಿಸಿದವರು ಸ್ವಾಮೀಜಿ– ಬಿಷಪ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 18:01 IST
Last Updated 22 ಜನವರಿ 2019, 18:01 IST
ಕೆ.ಎ.ವಿಲಿಯಂ
ಕೆ.ಎ.ವಿಲಿಯಂ   

ಮೈಸೂರು: ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಸಾಮಾಜಿಕ ಮೌಲ್ಯ ಹಾಗೂ ಮಾನವ ಹಕ್ಕುಗಳನ್ನು ಸಂರಕ್ಷಿಸಿದ ಮಹಾನ್ ವ್ಯಕ್ತಿ ಎಂದು ಬಿಷಪ್ ಡಾ.ಕೆ.ಎ.ವಿಲಿಯಂ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಇವರೊಬ್ಬ ಆಧ್ಯಾತ್ಮಿಕ ಗುರು ಮಾತ್ರವಲ್ಲ ‘ನಡೆದಾಡುವ ದೇವರು’ ಎಂದೇ ಪ್ರಸಿದ್ಧರಾದ ಸಂತರು. ಇವರು ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ. ಶೈಕ್ಷಣಿಕ ಹಾಗೂ ಬೌದ್ಧಿಕ ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರ ಎಂದು ಅವರು ಬಣ್ಣಿಸಿದ್ದಾರೆ.

ಇವರ ಅಧಿಕಾರಯುತ ಮಾತು, ಸ್ವಚ್ಛ ಹಾಗೂ ಸಂಪನ್ಮೂಲಭರಿತ ನಾಯಕತ್ವ, ಧಾರ್ಮಿಕತೆಗೆ ಸಮರ್ಪಿಸಿದ ಜೀವನ, ಬಡವರ ಮೇಲಿನ ಕರುಣೆ, ಶಾಂತಿಗಾಗಿ ಶ್ರಮಿಸಿದ ದಿನಗಳು ಹಾಗೂ ಸದಾ ದೇವರ ಭಕ್ತಿ ಮತ್ತು ಆರಾಧನೆಗಳು ಈ ಲೌಕಿಕ ಜಗತ್ತಿಗೆ ಅತಿ ಮುಖ್ಯವಾಗಿತ್ತು. ಆದರೆ, ಇದೆಲ್ಲವನ್ನೂ ಇವರ ಅಗಲಿಕೆಯಿಂದ ಕಳೆದುಕೊಳ್ಳುತ್ತಿದ್ದೇವೆ ಎಂದು ಅವರು ಶೋಕಿಸಿದ್ದಾರೆ.‌

ADVERTISEMENT

ಸ್ವಾಮೀಜಿ ಅವರು ಎಲ್ಲ ಧರ್ಮದವರಿಗೂ ಸ್ನೇಹಿತರಾಗಿದ್ದು, ಕ್ರೈಸ್ತರಿಗೆ ಅಚ್ಚುಮೆಚ್ಚಿನವರಾಗಿದ್ದರು. ಇವರು ದೇವರ ಪ್ರಸನ್ನತೆಗೆ ಬಲು ಹತ್ತಿರದವರಾಗಿದ್ದಾರೆ. ಮಾತ್ರವಲ್ಲ, ದೈವೀಕ ಪ್ರಭೆ ಹೊಂದಿದ್ದಾರೆ. ಇವರು ನಮ್ಮಿಂದ ಕಣ್ಮರೆಯಾದರೂ ಅವರ ನೆನಪು ಹಾಗೂ ಬದುಕಿನ ಮೌಲ್ಯಗಳು ಅವರ ಹಿಂಬಾಲಕರಿಗೂ, ಸಾವಿರಾರು ಧಾರ್ಮಿಕ ಸೋದರ, ಸೋದರಿಯರಿಗೆ ಪ್ರೇರಣೆಯಾಗಿಯೇ ಉಳಿಯುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.