ADVERTISEMENT

ಮೈಸೂರು: ನಗರದಲ್ಲಿ ನಡೆದ ಜೋಡಿ ಕೊಲೆಗೆ ಬೆಚ್ಚಿ ಬಿದ್ದ ಜನ

ಜಿಲ್ಲೆಯಲ್ಲಿ ಒಂದೇ ದಿನ 7 ಮಂದಿ ದಾರುಣ ಸಾವು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 1:50 IST
Last Updated 9 ಫೆಬ್ರುವರಿ 2021, 1:50 IST

ಮೈಸೂರು: ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿಯಿಂದ ಸೋಮವಾರ ಸಂಜೆಯವರೆಗೆ 7 ಮಂದಿ ದುರಂತ ಸಾವು ಕಂಡಿದ್ದಾರೆ. ಎಲೆತೋಟದ ಬಳಿ ಇಬ್ಬರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದರೆ, ಬನ್ನೂರಿನಲ್ಲಿ ಯುವಕರೊಬ್ಬರನ್ನು ಹೊಡೆದು ಸಾಯಿಸಲಾಗಿದೆ. ಉದ್ಬೂರಿನ ಸಮೀಪ ಕಾರು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು, ನಂಜನಗೂಡಿನಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಒಬ್ಬರು ಮೃತಪಟ್ಟಿದ್ದಾರೆ. ನಂಜನಗೂಡಿನ ಕಪಿಲಾ ನದಿಯಲ್ಲಿ ಮುಳುಗಿ ಒಬ್ಬರು ಮೃತಪಟ್ಟಿದ್ದಾರೆ.

ನಗರದಲ್ಲಿ ಜೋಡಿ ಕೊಲೆ

ನಿವೇಶನವೊಂದರ ಸಂಬಂಧ ಇದ್ದ ದ್ವೇಷದಿಂದ ಮದ್ಯ ಸೇವಿಸಿದ ಮತ್ತಿನಲ್ಲಿ ಗೌರಿಶಂಕರ ನಗರದ ನಿವಾಸಿಗಳಾದ ಕಿರಣ್ (30) ಹಾಗೂ ದೀಪಕ್‌ಕಿಶನ್‌ (30) ಎಂಬುವವರನ್ನು ಸ್ವಾಮಿ, ದಿಲೀಪ್, ರಘು ಹಾಗೂ ಮತ್ತಿತರು ಭೀಕರವಾಗಿ ಕೊಲೆ ಮಾಡಿದ್ದಾರೆ. ಈ ಪೈಕಿ ಇಬ್ಬರು ಜಯಪುರ ಠಾಣೆಗೆ ತೆರಳಿ ಶರಣಾಗಿದ್ದಾರೆ.

ADVERTISEMENT

ಚಾಮುಂಡಿಪುರಂ ವೃತ್ತದಿಂದ ಊಟಿ ರಸ್ತೆಗೆ ಹೋಗುವ ಮಾರ್ಗಮಧ್ಯೆ ಸಿನಿಮೀಯ ಶೈಲಿಯಲ್ಲಿ ಇವರನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿದೆ. ಇವರ ಸ್ನೇಹಿತ ಮಧುಸೂದನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲೆತೋಟದ ಸಮೀಪದಲ್ಲಿರುವ ಹೋಟೆಲ್‌ವೊಂದರಲ್ಲಿ ಕಿರಣ್ ಮತ್ತು ಇವರ ಸ್ನೇಹಿತರು ಬಾಡೂಟ ಮಾಡಿ, ಪಾರ್ಟಿ ಮಾಡಿದ್ದಾರೆ. ನಂತರ ಮನೆಗೆ ಬರುವಾಗ ಎದುರಾದ ಸ್ವಾಮಿಗೂ ಇವರಿಗೂ ಮಾತಿನ ಚಕಮಕಿ ನಡೆದಿದೆ. ನಂತರ ಕಿರಣ್, ಮಧುಸೂದನ್, ದೀಪಕ್‌ಕಿಶನ್‌ ಅವರು ಸ್ಕೂಟರ್‌ನಲ್ಲಿ ಹೋಗುವಾಗ ಎರಡು ಬೈಕ್‌ನಲ್ಲಿ ಬಂದ ಸ್ವಾಮಿ, ದಿಲೀಪ್, ರಘು ಎಂಬುವವರು ಇವರ ಮೇಲೆ ಹಲ್ಲೆ ನಡೆಸಿದರು. ಕಿರಣ್‌, ದೀಪಕ್‌ಕಿಶನ್‌ ಸ್ಥಳದಲ್ಲೆ ಮೃತಪಟ್ಟರೆ, ಮಧುಸೂದನ್‌ ಗಾಯಗೊಂಡರು. ಈ ವೇಳೆ ಇಲ್ಲಿಗೆ ಬಂದ ಪೊಲೀಸ್ ಗರುಡಾ ವಾಹನವನ್ನು ಕಂಡು ಆರೋಪಿಗಳು ಪರಾರಿಯಾದರು. ಆರೋಪಿಗಳಾದ ದಿಲೀಪ್ ಮತ್ತು ಮಧು ಜಯಪುರ ಠಾಣೆಗೆ ಹೋಗಿ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ, ಎಸಿಪಿ ಪೂರ್ಣಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಂಡ ತಪಾಸಣೆ ನಡೆಸಿವೆ.

ಬನ್ನೂರಿನಲ್ಲಿ ಕೊಲೆ

ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿನ ತ್ಯಾಗರಾಜ ಮೊಹಲ್ಲಾ ನಿವಾಸಿ ರಘು (28) ಎಂಬುವವರನ್ನು ಇವರ ಸೋದರ ರವಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.