ಮೈಸೂರು: ಪತ್ರಕರ್ತರು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಸದಸ್ಯರು ಎಂದು ಹೇಳಿಕೊಂಡ ಮೂವರು ಯುವತಿಯರು ಕೆ.ಆರ್.ಆಸ್ಪತ್ರೆಯ ವೈದ್ಯರೊಬ್ಬರನ್ನು ‘ಬ್ಲಾಕ್ಮೇಲ್’ ಮಾಡಿ ಹಣಕ್ಕೆ ಒತ್ತಾಯಿಸಿದ ಕುರಿತು ಇಲ್ಲಿನ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮ್ರಿನ್ ಸಾನಿಯಾ, ಶಾಹಿದಾ ಹಾಗೂ ಆಯಿಷಾಬಾಯಿ ಆರೋಪಿಗಳು. ಇವರು ಜ. 18ರಂದು ಕೆ.ಆರ್.ಆಸ್ಪತ್ರೆಯ ವೈದ್ಯರೊಬ್ಬರನ್ನು ಭೇಟಿ ಮಾಡಿ, ನಿಮ್ಮ ವಿರುದ್ಧ ಹಲವು ದೂರುಗಳು ಬಂದಿದ್ದು, ಇವುಗಳನ್ನು ಚಾನಲ್ವೊಂದರಲ್ಲಿ ಪ್ರಸಾರ ಮಾಡಲಾಗುವುದು. ಪ್ರಸಾರ ಮಾಡಬಾರದು ಎನ್ನುವುದಾದರೆ ₹ 5 ಲಕ್ಷ ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಸಂಜೆ ಹೊತ್ತಿಗೆ ₹ 1.75 ಲಕ್ಷ ಹಣವನ್ನು ಕುವೆಂಪುನಗರದ ಹೋಟೆಲ್ವೊಂದಕ್ಕೆ ತಂದುಕೊಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಸ್ಪಂದಿಸದೇ ಹೋದಾಗ ವೈದ್ಯರನ್ನು ಮಂಡಿಮೊಹಲ್ಲಾದಲ್ಲಿ ಸುಮಾರು 15ರಿಂದ 20 ಮಂದಿ ಹಣ ಕೊಡುವಂತೆ ಹೆದರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಮಂಡಿ ಠಾಣೆಯಲ್ಲಿ ದಾಖಲಾಗಿದೆ.
ಚಾಕುವಿನಿಂದ ಇರಿದಿದ್ದ ಆರೋಪಿ ಬಂಧನ
ಮೈಸೂರು: ಇಲ್ಲಿನ ದೇವರಾಜಅರಸು ರಸ್ತೆಯಲ್ಲಿ ಜ. 18ರಂದು ಚಾಕುವಿನಿಂದ ಇಬ್ಬರಿಗೆ ಇರಿದಿದ್ದ ಆರೋಪಿ ಜಯಕುಮಾರ್ (22) ಎಂಬಾತನನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಶಾಂತಲಾ ಚಿತ್ರಮಂದಿರದ ಸಮೀಪ ಸ್ನೇಹಿತನೊಬ್ಬನ ರೂಮಿನಲ್ಲಿ ಈತ ಇದ್ದುದ್ದರ ಖಚಿತ ಮಾಹಿತಿ ಮೇರೆಗೆ ಎಸಿಪಿ ಪೂರ್ಣಚಂದ್ರ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ವೆಂಕಟೇಶ್, ಸಿಬ್ಬಂದಿಯಾದ ಕಾರ್ತೀಕ್, ಆದಿಲ್, ಸೋಮಣ್ಣ ದಾಳಿ ನಡೆಸಿ ಬಂಧಿಸಿದರು.
ಕ್ಷುಲ್ಲಕ ಕಾರಣಕ್ಕೆ ರಂಜಿತ್ ಮತ್ತು ಅರುಣ್ ಅವರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಜಯಕುಮಾರ್, ಇವರು ಎಲ್ಲಿ ತನ್ನನ್ನು ಕೊಲೆ ಮಾಡುತ್ತಾರೋ ಎಂದು ಹೆದರಿ, ಅವರನ್ನು ಕೊಲ್ಲಲು ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.