ಮೈಸೂರು: ಇಲ್ಲಿನ ಹೈವೇ ವೃತ್ತದ ಬಳಿಯ ಉದ್ಯಾನದಲ್ಲಿ ಎನ್ಎಸಿ ಸಂಘಟನೆಯ ಸದಸ್ಯರು ಸಭೆ ನಡೆಸಿದರು.
ಸಂಘಟನೆ ಮುಖಂಡ ಸಿ.ಎಸ್.ಮಂಜುನಾಥ್ ಮಾತನಾಡಿ, ಸಂಘಟನೆಯನ್ನು ಬೆಳೆಸಲು ಮುಂದಾಗಬೇಕು ಎಂದರು.
‘ದೆಹಲಿಯಲ್ಲಿ ಎನ್ಎಸಿ ನಾಯಕರಾದ ಕಮಾಂಡರ್ ಅಶೋಕ್ ರಾವುತ್, ವೀರೇಂದ್ರ ಸಿಂಗ್, ರಮಾಕಾಂತ ನರಗುಂದ ಅವರು ಇಪಿಎಫ್ಒ ರಾಷ್ಟ್ರೀಯ ಮುಖ್ಯ ಕಮಿಷನರ್ ಹಾಗೂ ಕಾರ್ಮಿಕ ಸಚಿವರನ್ನು ಭೇಟಿಯಾದಾಗ ಇಪಿಎಸ್ 95 ಪಿಂಚಣಿಯ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರನ್ನು ಮುಂದಿನ ವಾರ ಭೇಟಿ ಮಾಡಲಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಬೇಕು’ ಎಂದು ತಿಳಿಸಿದರು.
ರಾಜ್ಯ ಕೆಎಸ್ಆರ್ಟಿಸಿ ಸಂಘಟನೆ ಕಾರ್ಮಿಕರು ಹುಬ್ಬಳ್ಳಿಯಲ್ಲಿ ಸಮಾವೇಶವನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ದೇಶದಾದ್ಯಂತ ಸಾಮೂಹಿಕ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಯಿತು. ದಿಲ್ಲಿ ಚಲೋ ಚಳವಳಿ ನಡೆಸುವ ಕುರಿತು ಮಾತುಕತೆ ನಡೆಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಷಡಕ್ಷರಿ, ಪದಾಧಿಕಾರಿಗಳಾದ ಶ್ರೀಕಂಠಪ್ರಸಾದ್, ಸೈಯದ್ ಮೊಹಮ್ಮದ್, ಮಹದೇವ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.